ಹಾವೇರಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯ ಕೆಲಭಾಗದಲ್ಲಿ ಶುಕ್ರವಾರ ಸಂಜೆ ಭಾರಿ ಗಾಳಿ, ಸಿಡಿಲು ಸಮೇತ ಮಳೆ ಸುರಿದಿದೆ.
ಬೆಳಗ್ಗೆಯಿಂದ ಸೆಕೆಯ ವಾತಾವರಣ ಇತ್ತು. ಸಂಜೆ ವೇಳೆಗೆ ಹಾವೇರಿ, ರಾಣೆಬೆನ್ನೂರ, ಶಿಗ್ಗಾಂವಿ, ಹಾನಗಲ್ಲ ಭಾಗದಲ್ಲಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಹಿರೇಕೆರೂರ, ಸವಣೂರು, ಬ್ಯಾಡಗಿ ಭಾಗದಲ್ಲೂ ಸಾಧಾರಣ ಮಳೆ ಬಿದ್ದಿದೆ. ಬಿರುಗಾಳಿಗೆ ಮಾವಿನ ಗಿಡ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ.
ಹಾವೇರಿಯ ಸುಭಾಷ್ ವೃತ್ತದಲ್ಲಿರುವ ಹೊಸಮನಿಯವರ ಓಣಿಯಲ್ಲಿರುವ ಸುಶೀಲವ್ವ ಹೊಸಮನಿ ಎಂಬುವರ ಹಳೇ ಮನೆ ಗೋಡೆ ಕುಸಿದಿದೆ. ಪಕ್ಕದ ಲಕ್ಷ್ಮಣ ಬೆಟಗೇರಿ ಎಂಬುವರ ಮನೆಗೂ ಹಾನಿಯಾಗಿದೆ. ಅದೇ ಸ್ಥಳದಲ್ಲಿ ವಿದ್ಯುತ್ ಕಂಬವೂ ಅರ್ಧಕ್ಕೆ ಮುರಿದು ಬಿದ್ದಿದ್ದು, ಶಹರದಲ್ಲಿ ಕೆಲ ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಸಂಚಾರಕ್ಕೂ ವ್ಯತ್ಯಯವಾಯಿತು.
ನೀರು ಪೂರೈಕೆಯಲ್ಲಿ ವ್ಯತ್ಯಯ: ರಾಣೆಬೆನ್ನೂರು ತಾಲೂಕು ಮುದೇನೂರು ಗ್ರಾಮದ ಬಳಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಬ್ಯಾಡಗಿ ಪಟ್ಟಣದ ನಾಗರಿಕರಿಗೆ ಶನಿವಾರ ಹಾಗೂ ಭಾನುವಾರ ಹೊಳೆ ನೀರು ಪೂರೈಕೆಯಾಗುವುದಿಲ್ಲ. ಸಾರ್ವಜನಿಕರು ಸಹಕರಿಸ ಬೇಕು ಎಂದು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ಯಾಡಗಿ ಪಟ್ಟಣಕ್ಕೆ ಮುದೇನೂರು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಶುಕ್ರವಾರ ಸಂಜೆ ಬೀಸಿದ ಮಳೆ,ಗಾಳಿಗೆ ಅಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಪಂಪ್ಹೌಸಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ವಿದ್ಯುತ್ ದುರಸ್ತಿಯಾದ ಬಳಿಕ ನೀರು ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.