More

    ಸರಸಕ್ಕೆ ಅಡ್ಡಿಪಡಿಸಿದ ಏನೂ ಅರಿಯದ ಕಂದಮ್ಮನ ಬಾಳಿಗೆ ಕೊಳ್ಳಿಯಿಟ್ಟ ಮಲತಂದೆ!

    ತಮಿಳುನಾಡು: ಸರಸಕ್ಕೆ ಅಡ್ಡಿಯಾದ ಮಗುವಿನ ತಲೆಗೆ ಮಲತಂದೆಯೊಬ್ಬ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಹತ್ಯೆಗೈದ ಅಮಾನುಷ ಘಟನೆಯೊಂದು ಕರ್ನಾಟಕ-ತಮಿಳುನಾಡು ಗಡಿಭಾಗವಾದ ಹೊಸೂರಿನಲ್ಲಿ ನಡೆದಿದೆ. ಜಗನ್ನಾಥನ್(3) ಮೃತ ಮಗು.

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಹೊಸೂರಿನ ಪಾರ್ವತಿ ನಗರ ನಿವಾಸಿ ರಂಜಿತ್(35) ಹಾಗೂ ನಂದಿನಿ(25)ಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ನಂದಿನಿ, ಶಕ್ತಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯದ ಕಾರಣದಿಂದ ಪತಿ ಸಾವನ್ನಪ್ಪಿದ್ದರು. ಪತಿಯ ಸಾವಿನ ನಂತರ ನಂದಿನಿ ರಂಜಿತ್ ಎಂಬಾತನೊಂದಿಗೆ ಸಂಸಾರ ನಡೆಸುತ್ತಿದ್ದಳು.

    ಕಳೆದ ಡಿಸೆಂಬರ್ 6ರಂದು ರಂಜಿತ್ ಮತ್ತು ನಂದಿನಿ ಸರಸಕ್ಕೆ 3 ವರ್ಷದ ಮಗು ಅಡ್ಡಿಪಡಿಸಿದೆ. ಇದರಿಂದ ಸಿಟ್ಟಾದ ರಂಜಿತ್ ಮಗುವಿನ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಮಗು ತೀವ್ರವಾಗಿ ಗಾಯಗೊಂಡಿದ್ದರಿಂದ, ನೆಪಕ್ಕೆ ಎಂಬಂತೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಮಗುವಿನ ತಾಯಿ ಮತ್ತು ಮಲತಂದೆ ಡಿಸೆಂಬರ್ 22ರಂದು ಚಿಕಿತ್ಸೆ ನಿಲ್ಲಿಸಿ ಮನೆಗೆ ಕರೆತಂದಿದ್ದಾರೆ. ಇದಾಗಿ ಡಿಸೆಂಬರ್ 25 ರಂದು ಮನೆಯಲ್ಲಿ ಮಗು ಸಾವನ್ನಪ್ಪಿದೆ. ನಂತರ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬರದಂತೆ ಮಗುವಿನಿ ಅಂತ್ಯಕ್ರಿಯೆ ಮಾಡಿದ್ದಾರೆ.

    ಕೆಲ ದಿನಗಳ ಬಳಿಕ ನಂದಿನಿ ತಾಯಿ ಮನೆಗೆ ಬಂದಾಗ ಮಗು ಇಲ್ಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಂದಿನ ಸಮರ್ಪಕ ಉತ್ತರ ನೀಡುವಲ್ಲಿ ಎಡವಿದ್ದಾಳೆ. ಅನುಮಾನಗೊಂಡ ನಂದಿನಿ ತಾಯಿ ಹೊಸೂರಿನ ಆಟ್ಕೊ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

    ಪೊಲೀಸರ ತನಿಖೆ ವೇಳೆ ಮಗುವಿನ ಹತ್ಯೆ ವಿಚಾರ ಬಯಲಾಗಿದ್ದು, ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಶವವನ್ನು ಹೊಸೂರಿನ ಗೋಕುಲ್ ನಗರದ ಸ್ಮಶಾನದಲ್ಲಿ ಆರೋಪಿಗಳು ಹೂತಿಟ್ಟಿದ್ದರು. ಸದ್ಯ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸರ ಸಮ್ಮುಖದಲ್ಲಿ ಮೃದದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts