ಮಡಿವಾಳ: ಮಾಲೂರು ತಾಲೂಕು ತೊರ್ನಹಳ್ಳಿಯ ಸಪ್ಪಲಾಂಭಾ ದೇವಾಲಯದ ಆವರಣದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಸ್ಫಫಲಾಂಭಾ ಭಿಮೇಶ್ವರಸ್ವಾಮಿ ಜಾನುವಾರುಗಳ ಜಾತ್ರೆ ಹಾಗೂ ಹುಣಸೆ ಫಸಲಿನ ಹರಾಜು ಪ್ರಕ್ರಿಯೆ ನೆರವೇರಿತು.
2023ನೇ ಸಾಲಿನ ಹುಣಸೆ ಫಸಲಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಂಗಡಿ ಮಾಲೀಕರು, ದಲ್ಲಾಳಿಗಳು, ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳ ಮಾಲೀಕರು ಮೈದಾನದ ಸುತ್ತ ನಾಲ್ಕು ದಿಕ್ಕುಗಳಲ್ಲಿ ರಾಸುಗಳ ಪರೀೆ ನಡೆಸಿ, ಹಿಂದಿನಿಂದ ನಡೆದುಕೊಂಡು ಬಂದ ಜಾನುವಾರುಗಳ ಜಾತ್ರೆ ನಡೆಸಲು ಅನುಮತಿ ಕೋರಿದರು.
ಕರೊನಾದಿಂದಾಗಿ ಎರಡು ವರ್ಷ ದನಗಳ ಜಾತ್ರೆ ನಡೆಸಲು ಆಗಿಲ್ಲ. ಈ ವರ್ಷ ಜಾತ್ರೆಗೆ ಅನುಮತಿ ಕೊಡದಿದ್ದರೆ ನಾವು ರಾಸುಗಳೊಂದಿಗೆ ಜಾತ್ರೆ ಸೇರುತ್ತೇವೆ ಎಂದು ನೆರೆದಿದ್ದ ಸುತ್ತಮುತ್ತಲ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಸಿ.ವಿ.ವೆಂಕಟರಮಣಪ್ಪ, ಎ.ಮಂಜುನಾಥ್, ಮುಖಂಡರಾದ ಜೆ.ನಾರಾಯಣಪ್ಪ, ಮಾಜಿ ಅಧ್ಯಕ್ಷ ಕೆ.ಮುನಿಶಾಮಪ್ಪ, ಸೀನಪ್ಪ, ಅರ್ಚಕ ಮುನಿಯಪ್ಪ, ಲಿಂಗಾರೆಡ್ಡಿ, ಮುಜರಾಯಿ ಇಲಾಖೆಯ ಆರ್.ಐ. ಹರಿಪ್ರಸಾದ್, ಪಶು ವೈದ್ಯಾಧಿಕಾರಿ ಶಿವಣ್ಣ, ಕಸಬಾ ಆರ್.ಐ ಲೋಕೇಶ್, ಗ್ರಾಮ ಲೆಕ್ಕಿಗ ಶಿವಕುಮಾರ್, ಗ್ರಾಮಸ್ಥರುಗಳು ಹಾಜರಿದ್ದರು.
ಈಗಾಗಲೇ ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿದ್ದು, ಜಾನುವಾರುಗಳ ಜಾತ್ರೆ ನಡೆಸಿದಲ್ಲಿ ಚರ್ಮಗಂಟು ರೋಗ ಉಲ್ಬಣಗೊಳ್ಳುವ ಸಾಧ್ಯತೆಯಿರುತ್ತದೆ. ಆದ್ದರಿಂದ ಜಾತ್ರೆಯನ್ನು ನಿಷೇಧಿಸಬೇಕು ಎಂದು ಪಶು ಇಲಾಖೆಯಿಂದ ಪತ್ರ ಸಲ್ಲಿಸಿದ್ದಾರೆ. ಅಂಗಡಿ ಮಾಲೀಕರು, ಜಾನುವರುಗಳ ಮಾಲೀಕರ ಮನವಿಯ ಮೇರೆಗೆ ಈ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ತಂದು ಜಾತ್ರೆಯನ್ನು ನಡೆಸುವ ಬಗ್ಗೆ ತಿಳಿಸಲಾಗುವುದು.
| ಮಲ್ಲಿಕಾರ್ಜುನ, ತಹಸೀಲ್ದಾರ್