ತೀರ್ಥಹಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಿಂದ ದೇಶದಲ್ಲಿ ಶಾಂತಿ, ಸುಭಿಕ್ಷೆ ನೆಲೆಸುವುದಲ್ಲದೆ ಭಾರತ ಜಗತ್ತಿನ ತಾಯಿ ಸ್ಥಾನದಲ್ಲಿ ನಿಲ್ಲುವ ಅರ್ಹತೆ ಗಳಿಸಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಮೃಗವಧೆಯಲ್ಲಿ ಮರುಸ್ಥಾಪನೆಗೊಂಡ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಮರಾಜ್ಯದ ಕಲ್ಪನೆಯೊಂದಿಗೆ ಶ್ರೀರಾಮನ ಕಾಲದ ಆಡಳಿತ ಜಾರಿಗೆ ಬರಲಿದೆ. ಈ ನೆಲದಲ್ಲಿ ಶಾಂತಿ ನೆಲೆಸಲಿದೆ. ಅನ್ನದ ಕೊರತೆ, ಯುದ್ಧದ ಸನ್ನಿವೇಶವೂ ಇರುವುದಿಲ್ಲ ಎಂದರು.
ಭಾರತ ಜಗತ್ತಿನ ತಾಯಿ ಸ್ಥಾನಕ್ಕೇರುವ ಸಂಕೇತವಾಗಿ ಈ ದಿನ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ನಡೆದಿದೆ. ಹಿಂದುಗಳ ಶತಮಾನಗಳ ನಿರೀಕ್ಷೆ ಈಡೇರಿದ್ದು, ದೇಶದ ಜನತೆ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದಿದ್ದಾರೆ. ಇಂತಹ ಮಹಾನ್ ಕಾರ್ಯದಲ್ಲಿ ಪಾಲ್ಗೊಳ್ಳುವ ಉದ್ದೇಶದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೆಲ್ಲ ಸವಲತ್ತುಗಳನ್ನು ತ್ಯಾಗ ಮಾಡಿ ಸನ್ಯಾಸಿಯಂತೆ ಅನುಷ್ಠಾನ ಪಾಲಿಸಿ ಧಾರ್ಮಿಕ ನಿಷ್ಠೆ ಮೆರೆದಿದ್ದಾರೆ ಎಂದು ಶ್ಲಾಘಿಸಿದರು.
ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆ ನಡೆದ ಮುಹೂರ್ತದಲ್ಲಿಯೇ ತ್ರೇತಾಯುಗದ ಪುರಾಣಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಈ ಪುಣ್ಯಕ್ಷೇತ್ರದಲ್ಲಿ ಹನುಮನ ದೇವಸ್ಥಾನ ಮರುಸ್ಥಾಪನೆಗೊಂಡಿರುವುದು ನಮ್ಮೆಲ್ಲರ ಯೋಗ. ತಾಲೂಕಿನಾದ್ಯಂತ ಈ ದಿನ ಹಬ್ಬದ ಸಂಭ್ರಮ ಎದ್ದುಕಾಣುತ್ತಿದೆ ಎಂದರು.
ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರಮನೆಕೇರಿ ಉದಯಶಂಕರ್, ಸದಸ್ಯರಾದ ಜಿ.ಎಸ್.ಚಿದಂಬರ್, ಜಿ.ಎಂ.ರವೀಂದ್ರ, ಮಾನಿಕಟ್ಟೆ ನಾಗೇಶ್, ಕಾನುಕೊಪ್ಪ ಶಿವಕುಮಾರ್, ಕೆ.ಶ್ರೀಧರ ಉಡುಪ, ಕೇರಿಕೆರೆ ಅನುಪಮಾ ಅರುಣ್ಕುಮಾರ್, ಗೀತಾ ಜಯಂತ್, ಹೊನ್ನಂಗಿ ಜಯದೇವ್ ಇದ್ದರು.