ಆನವಟ್ಟಿ: ಶಿಕ್ಷಣದಂತಹ ಶಕ್ತಿಯುತ ಖಾತೆ ದೊರೆತಿದ್ದು ನನ್ನ ಭಾಗ್ಯ. ರಾಜ್ಯದ ಪ್ರತಿ ಗ್ರಾಮಕ್ಕೂ ನನ್ನ ಸೇವೆ ಸಲ್ಲಿಕೆಯಾಗುತ್ತಿದ್ದು, ಈ ಮೂಲಕ ನಾಯಕತ್ವ ರೂಪಿಸಿಕೊಳ್ಳಲು ಸದಾವಕಾಶ ದೊರೆತಿದೆ. ಇಂತಹ ಅವಕಾಶ ದೊರೆಯಲು ಶಾಸಕರಾಗಿ ಆಯ್ಕೆ ಮಾಡಿದ ತಾಲೂಕಿನ ಜನತೆಗೆ ನಾನು ಋಣಿಯಾಗಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಭಾವುಕರಾದರು.
ಶನಿವಾರ ಆನವಟ್ಟಿಯ ಆಜಾದ್ ಬೀದಿಯಲ್ಲಿ 1.5 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನತೆ ದಿನನಿತ್ಯ ನೀಡುವ ತೆರಿಗೆ ಹಣವನ್ನು ಸಮರ್ಪಕವಾಗಿ ಜನರಿಗೇ ದೊರೆಯಬೇಕೆಂದು ಗ್ಯಾರಂಟಿಯಂತಹ ಕಾರ್ಯಕ್ರಮಗಳ ಮೂಲಕ ಜನರ ಹಣವನ್ನು ಮನೆ ಬಾಗಿಲಿಗೇ ತಲುಪಿಸುತ್ತಿದೆ. ಈ ಯೋಜನೆಗಳಿಗಾಗಿ ಪ್ರತಿವರ್ಷ ಸುಮಾರು 57 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಲಕ್ಷಾಂತರ ಬಡ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಬೇಕಾದ ತೆರಿಗೆ ಪಾಲನ್ನು ನೀಡದಿದ್ದರೂ ನಾವು ಕೊಟ್ಟ ಮಾತಿನಂತೆ ಜನರಿಗೆ ಗ್ಯಾರಂಟಿಗಳನ್ನು ತಲುಪಿಸಿದ್ದೇವೆ ಎಂದರು.
ನನಗೆ ಆಕಾರ ನೀಡಿದ ಕಾಂಗ್ರೆಸ್ ಪಕ್ಷ ನನ್ನ ಸಹೋದರಿ ಗೀತಾ ಶಿವರಾಜ್ಕುಮಾರ್ಗೂ ಲೋಕಸಭಾ ಚುನಾವಣೆಗೆ ಸ್ಪರ್ದಿಸಲು ಅವಕಾಶ ಕಲ್ಪಿಸಿದೆ. ಸಂಸದರು ಮತ್ತು ಉಸ್ತುವಾರಿ ಸಚಿವರು ಒಂದೇ ಜಿಲ್ಲೆಯವರಾದರೆ ಕೇಂದ್ರ ಹಾಗೂ ರಾಜ್ಯದಿಂದ ಹೆಚ್ಚಿನ ಅನುದಾನ ತರಲು ನೆರವಾಗುತ್ತದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಬ್ಬ ಮತದಾರರು ಈ ಬಾರಿ ಗೀತಾ ಶಿವರಾಜ್ಕುಮಾರ್ಗೆ ಮತ ನೀಡಿ ಹೆಚ್ಚಿನ ಬಹುಮತದಿಂದ ಅವರನ್ನೂ ಆಯ್ಕೆ ಮಾಡಬೇಕೆಂದು ವಿನಂತಿಸಿದರು.
ತದನಂತರ 2.5 ಕೋಟಿ ರೂ ವೆಚ್ಚದ ಆನವಟ್ಟಿಯ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣ ಹಾಗೂ ವಿಠಲಾಪುರ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಪ್ರಮುಖರಾದ ಚಂದ್ರಶೇಖರ್ ಜರ್ಮಲೆ, ಕೆ.ಪಿ.ರುದ್ರೇಗೌಡ, ಆರ್.ಸಿ.ಪಾಟೀಲ್, ಮಂಜಪ್ಪ ಮರದರ್, ಗಣಪತಿ, ೈರೊಜ್, ಹಬೀಬುಲ್ಲಾ ಹವಾಲ್ದಾರ್, ಅಲ್ಲಾಭಕ್ಷ, ಚಾಂದ್ಸಾಬ್, ಖಲಂದರ್ ಸಾಬ್, ವೀರಪ್ಪ ಜಡೆ, ಮಾಲತೇಶ ಲಕ್ಕವಳ್ಳಿ ಮತ್ತಿತರರಿದ್ದರು.