ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದ ತಮಿಳು ವಿದ್ವಾಂಸ, ವಾಗ್ಮಿ ನೆಲ್ಲೈ ಕಣ್ಣನ್ ಅವರನ್ನು ಪೆರಂಬಲೂರ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ ಕಣ್ಣನ್, ಅಮಿತ್ ಷಾ ಅವರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿದ್ದರು.
ಅಮಿತ್ ಷಾ ಅವರು ಪ್ರಧಾನಿ ಮೋದಿಯವರ ಮಿದುಳು ಇದ್ದಂತೆ. ಅಮಿತ್ ಷಾ ಕರೆ ಮುಗಿದರೆ ಮೋದಿಯವರ ಕತೆ ಮುಗಿದಂತೆ. ಅಷ್ಟಾದರೂ ಕೂಡ ಯಾವ ಮುಸ್ಲಿಮರೂ ಇನ್ನು ಅವರಿಬ್ಬರನ್ನು ಹತ್ಯೆ ಮಾಡಲು ಮುಂದಾಗುತ್ತಿಲ್ಲ. ಇದು ನನಗೆ ಅಚ್ಚರಿ ತಂದಿದೆ ಎಂದು ಹೇಳುವ ವಿವಾದ ಸೃಷ್ಟಿಸಿದ್ದರು.
ಅಷ್ಟೇ ಅಲ್ಲದೆ ತಮಿಳು ನಾಡು ಮುಖ್ಯಮಂತ್ರಿ ಕೆ.ಪಳಿನಿಸ್ವಾಮಿ ಮತ್ತು ಡಿಸಿಎಂ ಒ.ಪನ್ನೀರಸೆಲ್ವಂ ವಿರುದ್ಧ ಕೂಡ ಕಣ್ಣನ್ ಕಟುವಾಗಿ ಟೀಕಿಸಿದ್ದಾರೆ.
ಪ್ರಧಾನಿ ಹಾಗೂ ಗೃಹಸಚಿವರ ಹತ್ಯೆಗೆ ಕರೆ ನೀಡಿದ ಆರೋಪ ಮಾಡಿ ಬಿಜೆಪಿ ಮುಖಂಡರೋರ್ವರು ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೆ, ಬಿಜೆಪಿ ಹಿರಿಯ ನಾಯಕರಾದ ಪಾನ್ ರಾಧಾಕೃಷ್ಣನ್, ಸಿ.ಪಿ.ರಾಧಾಕೃಷ್ಣನ್, ಎಲ್. ಗಣೇಶನ್ ಹಾಗೂ ಎಚ್. ರಾಜಾ ಅವರು ಮರೀನಾ ಬೀಚ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ನೆಲ್ಲೈ ಕಣ್ಣನ್ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರು.
ನೆಲ್ಲೈ ಕಣ್ಣನ್ ಅವರ ಮಾತುಗಳು ಹಿಂಸೆಯನ್ನು ಪ್ರಚೋದಿಸುವಂತಿದೆ ಎಂದು ಪ್ರತಿಪಾದಿಸಿ ಒಟ್ಟು 15 ದೂರುಗಳು ದಾಖಲಾಗಿದ್ದವು. ಪೊಲೀಸರು ಪ್ರತ್ಯೇಕ ಎಫ್ಐಆರ್ ಕೂಡ ದಾಖಲಿಸಿದ್ದರು.
ನೆಲ್ಲೈ ಕಣ್ಣನ್ ಬಂಧನವಾಗುತ್ತಿದ್ದಂತೆ ಬಿಜೆಪಿ ನಾಯಕ ಎಚ್.ರಾಜಾ ಅವರು ಟ್ವೀಟ್ ಮಾಡಿ, ನೆಲ್ಲೈ ವಿರುದ್ಧ ದೂರು ದಾಖಲಿಸಿದ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲ ಬಿಜೆಪಿ ಕಾರ್ಯಕರ್ತರು, ನಾಯಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)