More

    ಯಶ್ ಜತೆ ತಮನ್ನಾ ನಟಿಸಲ್ಲ; ಹರಿದಾಡಿದ ವದಂತಿಗೆ ತೆರೆ ಎಳೆದ ನಿರ್ದೇಶಕ ನರ್ತನ್…

    ಬೆಂಗಳೂರು: ಕಳೆದ ಹಲವು ದಿನಗಳಿಂದ ಬರೀ ಸ್ಯಾಂಡಲ್​ವುಡ್ ಅಷ್ಟೇ ಅಲ್ಲ, ಪಕ್ಕದ ಟಾಲಿವುಡ್ ಮತ್ತು ಕಾಲಿವುಡ್​ನಲ್ಲೂ ಸಖತ್ ಸದ್ದು ಮಾಡುತ್ತಿರುವ ಸುದ್ದಿಗಳ ಪೈಕಿ ‘ರಾಕಿಂಗ್ ಸ್ಟಾರ್’ ಯಶ್ ಮತ್ತು ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ ಹೊಸ ಸಿನಿಮಾ ಬಗೆಗಿನ ಸುದ್ದಿ ಮೊದಲ ಸ್ಥಾನದಲ್ಲಿದೆ.

    ಯಶ್ ಅಭಿನಯದ ಹೊಸ ಚಿತ್ರಕ್ಕೆ ‘ಮಫ್ತಿ’ ಸಿನಿಮಾ ನಿರ್ದೇಶಕ ನರ್ತನ್ ಆಕ್ಷನ್-ಕಟ್ ಹೇಳಲಿದ್ದಾರಂತೆ, ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಂತೆ, ಯಶ್​ಗೆ ತಮನ್ನಾ ನಾಯಕಿಯಂತೆ … ಎಂಬ ಹಲವು ಅಂತೆ-ಕಂತೆಗಳ ರಾಶಿಯೇ ಸಿನಿಮಾ ಅಂಗಳದಲ್ಲಿ ಹರಿದಾಡುತ್ತಿದೆ. ಹಾಗೆ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದರ ಬಗ್ಗೆ ಸ್ವತಃ ನಿರ್ದೇಶಕ ನರ್ತನ್ ಒಂದಷ್ಟು ಮಾಹಿತಿಯನ್ನು ‘ವಿಜಯವಾಣಿ’ ಜತೆಗೆ ಹಂಚಿ ಕೊಂಡಿದ್ದಾರೆ.

    ಇದನ್ನೂ ಓದಿ: ಕನ್ನಡದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ; ಪುನೀತ್​ ರಾಜ್​ಕುಮಾರ್ ಕೊಟ್ರು ಸುಳಿವು!!

    ‘ನನ್ನ ಮತ್ತು ಯಶ್ ಕಾಂಬಿನೇಷನ್​ನಲ್ಲಿ ಸಿನಿಮಾ ಮಾಡುವುದಷ್ಟೇ ಫೈನಲ್ ಆಗಿದೆ ಎಂಬುದನ್ನು ಬಿಟ್ಟರೆ, ಯಾವುದೂ ಅಂತಿಮ ಆಗಿಲ್ಲ. ಇನ್ನೂ ಕಥೆಯೇ ಸಿದ್ಧವಾಗಿಲ್ಲ. ಅದನ್ನು ಯಶ್ ಕೇಳಿ, ಓಕೆ ಅಂದಮೇಲಷ್ಟೇ ಮುಂದಿನ ಕೆಲಸಕ್ಕೆ ಕೈ ಹಾಕುತ್ತೇನೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಇಲ್ಲಸಲ್ಲದ ಸುದ್ದಿಗಳೆಲ್ಲ ಹರಿದಾಡುತ್ತಿವೆ. ಅದರಲ್ಲೂ ತಮನ್ನಾ ಭಾಟಿಯಾ, ಯಶ್​ಗೆ ನಾಯಕಿ ಎಂಬುದಂತೂ ಶುದ್ಧ ಸುಳ್ಳು. ನಾಯಕಿ ಯಾರೆಂಬುದನ್ನು ನಾನು ಇನ್ನೂ ವಿಚಾರವನ್ನೇ ಮಾಡಿಲ್ಲ. ಅದರಲ್ಲೂ ನನ್ನ ಚಿತ್ರದಲ್ಲಿ ನಾಯಕಿಯ ಪ್ರಾಮುಖ್ಯತೆ ಚೂರು ಕಡಿಮೆ. ಈ ಚಿತ್ರ ನಾಯಕ ಕೇಂದ್ರಿತವಾಗಿರುತ್ತದೆ’ ಎಂದು ಹರಿದಾಡಿದ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ ನರ್ತನ್. ‘ಕೆಜಿಎಫ್’ ಸಿನಿಮಾ ಬಿಡುಗಡೆ ಆದ ಮೇಲಿಂದ ಯಶ್ ಚಿತ್ರಗಳಿಗೆ ರಾಷ್ಟ್ರ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ಬರೀ ಕನ್ನಡಿಗರಷ್ಟೇ ಅಲ್ಲ, ಬೇರೆ ಭಾಷೆಯ ಪ್ರೇಕ್ಷಕರೂ ಸಹ ಯಶ್ ಚಿತ್ರಗಳತ್ತ ದೃಷ್ಟಿ ನೆಟ್ಟಿದ್ದಾರೆ. ಹಾಗಾಗಿ ಯಶ್ ಸಿನಿಮಾ ಬಗ್ಗೆ ಸಣ್ಣ ಸುದ್ದಿ ಹೊರಬಿದ್ದರೂ, ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಸದ್ಯ ತಮನ್ನಾ ವಿಚಾರದಲ್ಲಿ ಆಗಿದ್ದೂ ಅದೇ. ಇದೀಗ ಆ ಎಲ್ಲ ವದಂತಿಗಳಿಗೆ ಸ್ವತಃ ನಿರ್ದೇಶಕರೇ ಉತ್ತರ ನೀಡಿದ್ದಾರೆ. ಇನ್ನೇನಿದ್ದರೂ ಲಾಕ್​ಡೌನ್ ಮುಗಿದ ಬಳಿಕವಷ್ಟೇ ಮುಂದಿನ ನಡೆ ಏನು ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರಂತೆ ನರ್ತನ್.

    ಸದ್ಯಕ್ಕೆ ಸಿನಿಮಾ ಮಾಡುವ ಬಗ್ಗೆ ಒಂದು ಹಂತದ ಚರ್ಚೆ ನಡೆದಿದೆ. ಸಿದ್ಧವಾಗುತ್ತಿರುವ ಕಥೆ ಯಶ್ ಕೇಳಬೇಕು. ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ಮುಂದಿನ ನಿರ್ಧಾರ. ಆದರೆ, ತಮನ್ನಾ ನಾಯಕಿಯಾಗಿ ಇರಲಿದ್ದಾರೆ ಎಂಬುದು ಸುಳ್ಳು ಸುದ್ದಿ.

    | ನರ್ತನ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts