ಶಿವಮೊಗ್ಗ: ನಗರದ ಹೊರವಲಯದಲ್ಲಿ ಈಜಾಡಲು ಈಜುಕೊಳಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮೀನಾಕ್ಷಿ ಭವನ ಸಮೀಪದ ಜೋಸೆಫ್ನಗರದ ನಿವಾಸಿ ರಾಕೇಶ್(18) ಮೃತ ವಿದ್ಯಾರ್ಥಿ. ಈತ ಖಾಸಗಿ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದು ಬುಧವಾರ ಬೆಳಗ್ಗೆ ಸ್ನೇಹಿತರೊಂದಿಗೆ ಸಾಗರ ರಸ್ತೆಯ ಖಾಸಗಿ ಸ್ವಿಮ್ಮಿಂಗ್ಫೂಲ್ಗೆ ತೆರಳಿದ್ದ. ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಂಡು ನೀರಿಗೆ ಇಳಿದಿದ್ದ ರಾಕೇಶ್ ಮತ್ತೆ ಮೇಲೇಳಲೇ ಇಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪಾಲಕರಿಗೆ ಹಸ್ತಾಂತರಿಸಲಾಯಿತು.
ರಾಕೇಶ್ ಕಾಲೇಜಿನಲ್ಲಿ ಓದುತ್ತಲೇ ಶಂಕರಮಠ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ನಲ್ಲಿ ಪಾರ್ಟ್ಟೈಮ್ ಕೆಲಸ ಮಾಡುತ್ತಿದ್ದ. ತಂದೆ ಲಾರಿ ಚಾಲಕರಾಗಿದ್ದರು. ಈ ಹಿಂದೆಯೂ ಅದೇ ಈಜುಕೊಳದಲ್ಲಿ ಯುವಕ ಮೃತಪಟ್ಟಿದ್ದ. ಅದಾದ ಬಳಿಕ ಈಜುಕೊಳವನ್ನು ಸ್ಥಗಿತಗೊಳಿಸಲಾಗಿತ್ತು. ಸ್ವಲ್ಪ ದಿನದ ಹಿಂದೆ ಮತ್ತೆ ಆರಂಭಿಸಲಾಗಿತ್ತು ಎನ್ನಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.