ಮಂಗಳೂರು: ತಮ್ಮ ಕಚೇರಿಯಲ್ಲಿ ಪ್ರತಿದಿನವೂ ಸ್ವಚ್ಛತೆಯ ಕೆಲಸ ಮಾಡುವ ಹಿರಿಯ ಮಹಿಳೆಯೂ ಸೇರಿ, 32 ಸಿಬ್ಬಂದಿಯನ್ನು ವಿಮಾನದ ಮೂಲಕ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕರೆದುಕೊಂಡು ಹೋಗಿರುವ ಸಂಸ್ಥೆಯೊಂದರ ಮುಖ್ಯಸ್ಥರು ತಮ್ಮ ಬಹುಕಾಲದ ಕನಸು ಪೂರೈಸಿದ್ದಾರೆ.
ಸಹಕಾರಿ ವಲಯದಲ್ಲಿ ತಂತ್ರಾಂಶ ಒದಗಿಸುವ ರಾಜ್ಯದ ಮುಂಚೂಣಿಯ ಸಂಸ್ಥೆಯಾದ ಮಂಗಳೂರಿನ ಆಟೋಮೇಶನ್ ಕ್ಲೌಡ್ ಸೊಲ್ಯೂಶನ್ಸ್ 2000 ಗ್ರಾಹಕರ ಗುರಿ ಮುಟ್ಟಿದ ಸಂಭ್ರಮದ ಅಂಗವಾಗಿ ಈ ಪ್ರವಾಸ ಆಯೋಜಿಸಿತ್ತು. ಒಟ್ಟು 34 ಜನ ವಿಮಾನದಲ್ಲಿ ಮಂಗಳೂರಿಂದ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ನಂದಿ ಹಿಲ್ಸ್, ಈಶ ಫೌಂಡೇಶನ್, ಕೆಲವು ಪುಣ್ಯಕ್ಷೇತ್ರಗಳಿಗೂ ತೆರಳಿದ್ದಾರೆ. ಈ ಪೈಕಿ 28 ಜನರಿಗೆ ಇದು ಮೊದಲ ವಿಮಾನ ಪ್ರಯಾಣ. ಕಚೇರಿಯಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಕಸ್ತೂರಿ ಅವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿದ್ದರು.
‘ನಾವು ಮೊದಲ ಸಲ ವಿಮಾನದಲ್ಲಿ ಪ್ರಯಾಣ ಮಾಡುವಾಗ ಸಂಸ್ಥೆಯ ಎಲ್ಲರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಬೇಕೆಂಬ ಕನಸು ಇತ್ತು. ಅದನ್ನು ನನಸಾಗಿಸಿದ್ದೇವೆ’ ಎಂದು ಕಂಪನಿಯ ಆಡಳಿತ ನಿರ್ದೇಶಕ ಜಗದೀಶ್ ರಾಮ ಮತ್ತು ಚೇರ್ಮನ್ ಲೋಕೇಶ್ ಎನ್. ತಿಳಿಸಿದ್ದಾರೆ.
—————————————–
ಜೀವನದಲ್ಲಿ ಇದೇ ಮೊದಲ ಸಲ ವಿಮಾನದಲ್ಲಿ ಪ್ರಯಾಣ ಮಾಡಿದ ಅನುಭವ ಆಯಿತು. ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಹಲವು ಬೆಂಗಳೂರಿನ ಹಲವು ಪುಣ್ಯಕ್ಷೇತ್ರಗಳ ದರ್ಶನ ಮಾಡಿದ್ದು ಖುಷಿಯಾಗಿದೆ.
ಕಸ್ತೂರಿ, ಸ್ವಚ್ಛತಾ ಸಿಬ್ಬಂದಿ