ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರು ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್ ಅಭಿವೃದ್ಧಿಗೆ ಮುಂದಾಗಿದ್ದಾರೆ. ಉತ್ತರ ಪ್ರದೇಶದವರಾದ ಸುರೇಶ್ ರೈನಾ, ಮುಂಬರುವ ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಪರ ಆಡಲಿದ್ದಾರೆ. ಕಾಶ್ಮೀರಿ ಪಂಡಿತರಾಗಿರುವ ಅವರು, ತಮ್ಮ ಮೂಲಸ್ಥಳದಲ್ಲೂ ಕ್ರಿಕೆಟ್ ಅಭಿವೃದ್ಧಿ ಕಾಣಬೇಕೆಂದು ಬಯಸಿದ್ದಾರೆ.
ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿರುವ ರೈನಾ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳ ಕಾಲ ಆಡಿರುವ ತಮ್ಮ ಅನುಭವ, ಜ್ಞಾನ ಮತ್ತು ಕೌಶಲವನ್ನು ಜಮ್ಮು-ಕಾಶ್ಮೀರದ ಮಕ್ಕಳೊಂದಿಗೆ ಹಂಚಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ. ಸುರೇಶ್ ರೈನಾ ಅವರು ಟೀಮ್ ಇಂಡಿಯಾ ಪರ ಆಡಿದ ಮೊಟ್ಟಮೊದಲ ಕಾಶ್ಮೀರಿ ಪಂಡಿತರೆಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
33 ವರ್ಷದ ರೈನಾ ಜಮ್ಮು-ಕಾಶ್ಮೀರದ ಗ್ರಾಮೀಣ ಭಾಗದ ಶಾಲೆ ಮತ್ತು ಕಾಲೇಜುಗಳಲ್ಲಿ ಕ್ರಿಕೆಟ್ ತರಬೇತಿ ನೀಡಲು ಬಯಸಿದ್ದಾರೆ. ಕೇಂದ್ರಾಡಳಿತ ಪ್ರದೇಶದ ಯುವಕರು ಕೂಡ ಕ್ರಿಕೆಟ್ನಲ್ಲಿ ಸಾಧನೆ ಮಾಡುವುದನ್ನು ನೋಡಲು ಬಯಸಿರುವುದಾಗಿ ರೈನಾ ಹೇಳಿದ್ದಾರೆ.
ಇದನ್ನೂ ಓದಿ: ಯುಎಇ ಯಾರಿಗೆ ವರದಾನ? ಶುರುವಾಗಿದೆ ಲೆಕ್ಕಾಚಾರ…
ಕಳೆದ ಶನಿವಾರವಷ್ಟೇ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಲ್ಲಿ ರೈನಾ ಅವರಿಗೆ ಸ್ಥಳೀಯ ಕ್ರಿಕೆಟ್ ಅಭಿವೃದ್ಧಿಗೆ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು. ಅದರ ಬೆನ್ನಲ್ಲೇ ರೈನಾ, ಆಹ್ವಾನವನ್ನು ಒಪ್ಪಿಕೊಂಡು ಡಿಜಿಪಿಗೆ ಸುದೀರ್ಘ ಪತ್ರದ ಮೂಲಕ ಜಮ್ಮು-ಕಾಶ್ಮೀರದ ಕ್ರಿಕೆಟ್ ಅಭಿವೃದ್ಧಿಗೆ ಐದು ಅಂಶಗಳ ಯೋಜನೆಯನ್ನು ಹಂಚಿಕೊಂಡಿದ್ದಾರೆ.
ಸುರೇಶ್ ರೈನಾ ಅವರ 5 ಅಂಶಗಳ ಯೋಜನೆಗಳೆಂದರೆ: 1. ಜಮ್ಮು-ಕಾಶ್ಮೀರದ ಗ್ರಾಮೀಣ ಪ್ರದೇಶ, ಶಾಲೆ ಮತ್ತು ಕಾಲೇಜುಗಳಲ್ಲಿ ಪ್ರತಿಭಾನ್ವೇಷಣೆ. 2. ಮಾಸ್ಟರ್ ಕ್ಲಾಸ್ಗಳನ್ನು ಆಯೋಜಿಸುವುದು. 3. ಮಾನಸಿಕ ಸದೃಢತೆಯ ಕೋರ್ಸ್ಗಳು. 4. ದೈಹಿಕ ಫಿಟ್ನೆಸ್. 5. ಕೌಶಲ ತರಬೇತಿ.
Excellent initiative! Cricketer friend Suresh Raina writes to J&K DGP Dilbag Singh, offers cricket opportunity for underprivileged & rural area children in Jammu & Kashmir. Kudos, Suresh! This will go a long way in getting talented youth in J&K national/international recognition. pic.twitter.com/eNrnJT7Kfh
— Aditya Raj Kaul (@AdityaRajKaul) August 26, 2020