ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಕರೊನಾ ವೈರಸ್ ಸೋಂಕು ಪರೀಕ್ಷೆ ಉಚಿತವಾಗಿ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತಿದ್ದುಪಡಿ ಆದೇಶ ಹೊರಡಿಸಿದೆ.
ಕಳೆದ ವಾರ ಎಲ್ಲರಿಗೂ ಉಚಿತವಾಗಿ ಪರೀಕ್ಷೆ ನಡೆಸಬೇಕು ಎಂದು ಕೋರ್ಟ್ ಆದೇಶ ಹೊರಡಿಸಿತ್ತು. ಆದರೆ ಈಗ ಬಡವರಿಗೆ ಮಾತ್ರ ಉಚಿತವಾಗಿ ಪರೀಕ್ಷೆ ನಡೆಸಿ ಉಳ್ಳವರಿಂದ ಹಣ ಪಡೆಯಬೇಕು ಎಂದು ಆದೇಶ ನೀಡಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ರವೀಂದ್ರಭಟ್ ಅವರನ್ನು ಒಳಗೊಂಡ ಪೀಠ ತಿದ್ದುಪಡಿ ಆದೇಶ ಹೊರಡಿಸಿದೆ.
ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿ ಕೆಲವು ಖಾಸಗಿ ಪ್ರಯೋಗಾಲಯಗಳಿಗೂ ಪರೀಕ್ಷೆ ನಡೆಸುವ ಅನುಮತಿ ನೀಡಿತು.
ಖಾಸಗಿ ಆಸ್ಪತ್ರೆಯ ಪ್ರಯೋಗಾಲಯಗಳು ಪ್ರತಿ ಪರೀಕ್ಷೆಗೆ 4,500 ರೂಪಾಯಿ ಹಣ ಪಡೆಯುತ್ತಿದ್ದವು. ಇದನ್ನು ಕೆಲವರು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಬಾರಿ ವಿಚಾರಣೆ ನಡೆಸಿದ ಕೋರ್ಟ್ ಖಾಸಗಿ ಆಸ್ಪತ್ರೆಗಳು ಎಲ್ಲರಿಗೂ ಉಚಿತವಾಗಿ ಪರೀಕ್ಷೆ ನಡೆಸಬೇಕು ಎಂದು ಆದೇಶ ಹೊರಡಿಸಿತ್ತು.
ವಾರದ ನಂತರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸುಪ್ರೀಂಕೋರ್ಟ್ಗೆ ಮನವಿ ಮಾಡಿ ಹಿಂದೆ ನೀಡಿದ್ದ ಆದೇಶವನ್ನು ತಿದ್ದುಪಡಿ ಮಾಡಬೇಕು. ಬಡವರಿಗೆ ಮಾತ್ರ ಉಚಿತವಾಗಿ ಪರೀಕ್ಷೆ ನಡೆಸುವ ಆದೇಶ ಹೊರಡಿಸಬೇಕು ಎಂದು ಕೋರಿಕೆ ಸಲ್ಲಿಸಿತ್ತು. ಕೋರ್ಟ್ ಪುರಸ್ಕರಿಸಿ ತಿದ್ದುಪಡಿ ಆದೇಶ ಹೊರಡಿಸಿದೆ. (ಏಜೆನ್ಸೀಸ್)
ಓರ್ವ ಕರೊನಾ ಸೋಂಕಿತ ವ್ಯಕ್ತಿಯಿಂದ ಉತ್ತರ ಪ್ರದೇಶದ 14 ಗ್ರಾಮಗಳ ಗ್ರಾಮಸ್ಥರು ಅನುಭವಿಸುತ್ತಿರುವುದಾದರೂ ಏನು?