ಕೋಲಾರ: ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ರ್ನಿಲಕ್ಷಿಸಿ ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಡಾ.ಎಂ.ಸಿ.ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದರ ಕುರಿತು ಕಾಂಗ್ರೆಸ್ ಎಸ್ಸಿ ಘಟಕದ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭಾನುವಾರ ಭೇಟಿಯಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎಸ್ಸಿ ಘಟಕದ ಅಧ್ಯಕ್ಷ ಆರ್.ಧರ್ಮಸೇನಾ ಮಾತನಾಡಿ, ಪಕ್ಷದಲ್ಲಿ ಒಬ್ಬ ದಲಿತ ನಾಯಕನಿಗೆ ಅನ್ಯಾಯವಾಗಿದೆ. ಆದರೆ ಪಕ್ಷದಿಂದ ಅವರನ್ನು ಭೇಟಿಯಾಗಿ ಸಮಾಧಾನಪಡಿಸುವ ಪ್ರಯತ್ನವೂ ನಡೆಸಿಲ್ಲ. ಹಾಗಾದರೆ ದಲಿತ ನಾಯಕರು ಪಕ್ಷಕ್ಕೆ ಅಗತ್ಯವಿಲ್ಲವೇ? 7 ಬಾರಿ ಸಂಸದರಾಗಿದ್ದು, ಕಳೆದ ಬಾರಿ ಚುನಾವಣೆಯಲ್ಲಿ 5 ಲಕ್ಷ ಮತ ಪಡೆದಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ಪಕ್ಷ ನಡೆಸಿಕೊಳ್ಳುತ್ತಿರುವ ರೀತಿ ನೋವುಂಟು ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿಯೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಮುನಿಯಪ್ಪ ಅವರೊಂದಿಗೆ ಏಕೆ ಚರ್ಚಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೆ.ಎಚ್.ಮುನಿಯಪ್ಪ ರಾಷ್ಟ್ರಮಟ್ಟದ ದಲಿತ ನಾಯಕರಾಗಿದ್ದು, ಅವರ ಅಗತ್ಯ ಪಕ್ಷಕ್ಕಿಲ್ಲ ಎನ್ನುವಂತೆ ವರ್ತನೆ ತೋರಲಾಗುತ್ತಿದೆ. ಇದನ್ನು ಸರಿಪಡಿಸುವ ಪ್ರಯತ್ನ ಏಕೆ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ನಾನು ಮತ್ತು ಎಚ್.ಕೆ.ಪಾಟೀಲ್ ಜತೆಯಾಗಿ ಕೆ.ಎಚ್.ಮುನಿಯಪ್ಪ ಮನೆಗೆ ಹೋಗಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದೇವೆ. ಅವರು ನಮ್ಮ ನಾಯಕರು, ಅವರೆಂದೂ ಪಕ್ಷ ಬಿಡುವುದಿಲ್ಲ. ಅವರೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ.
ಮುನಿಯಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಮಾಜಿ ಸ್ಪೀಕರ್ ರಮೇಶ್ಕುಮಾರ್ ವಿರುದ್ಧ ವಾಗ್ಧಾಳಿ ನಡೆಸಿದ್ದೇಕೆ ಎಂದು ಡಿ.ಕೆ.ಶಿವಕುಮಾರ್ ಮುಖಂಡರನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಮೊದಲು ಕೊತ್ತೂರು ಮಂಜುನಾಥ್, ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಅತ್ಯಂತ ಕೀಳುಮಟ್ಟದ ಪದಗಳನ್ನು ಕೆ.ಎಚ್.ಮುನಿಯಪ್ಪ ವಿರುದ್ಧ ಬಳಸಿದ್ದರು. ಆ ನಂತರವೇ ಸುದ್ದಿಗೋಷ್ಠಿ ಮಾಡಿ ರಮೇಶ್ಕುಮಾರ್ ವಿರುದ್ಧ ಮಾತನಾಡಿದ್ದು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ನಂತರ ಡಿ.ಕೆ.ಶಿವಕುಮಾರ್ ಮಾತನಾಡಿ, ಕೆ.ಎಚ್.ಮುನಿಯಪ್ಪ ರಾಷ್ಟ್ರಮಟ್ಟದ ನಾಯಕರಾಗಿದ್ದಾರೆ. ಪಕ್ಷಕ್ಕೆ ಅವರ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಅವರಿಗೆ ಮುಜುಗರವಾಗುವಂತಹ ಯಾವುದೇ ಪ್ರಕ್ರಿಯೆ ನಡೆಸುವುದಿಲ್ಲ. ಅವರು ಕಾಂಗ್ರೆಸ್ನ ನಿಷ್ಠಾವಂತ ನಾಯಕರಾಗಿದ್ದು, ಕೆಲವೊಂದು ಬಾರಿ ನನ್ನ ವಿರುದ್ಧವೂ ಮಾತನಾಡಿದ್ದಾರೆ. ಆದರೆ ಹಿರಿಯರಾದ ಅವರ ಮಾತುಗಳನ್ನು ಆಶೀರ್ವಾದ ಎಂದು ತಿಳಿದಿದ್ದೇನೆ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ ಶ್ರೀಧರ್, ದೇವನಹಳ್ಳಿ ಕ್ಷೇತ್ರದ ಎಸ್ಸಿ ಘಟಕ ಅಧ್ಯಕ್ಷ ರಾಮಪ್ಪ, ಕೋಗಿಲ ವೆಂಕಟೇಶ್, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್ ಇತರರು ಹಾಜರಿದ್ದರು.