ಚೆನ್ನೈ: ಸೂಪರ್ಸ್ಟಾರ್ ರಜಿನಿಕಾಂತ್ ಅವರು ರಾಜಕೀಯ ಪ್ರವೇಶವನ್ನು ಘೋಷಿಸಿ 2 ವರ್ಷದ ಮೇಲೆಯೇ ಆಗಿದೆ. ಆದರೆ, ಈವರೆಗೂ ತಮ್ಮ ಪಕ್ಷ ಯಾವುದೆಂದು ತಿಳಿಸಿಲ್ಲ. ಇದೀಗ ರಜಿನಿ ಆಪ್ತ ಮೂಲಗಳ ಪ್ರಕಾರ ಮುಂದಿನ ಏಪ್ರಿಲ್ನಲ್ಲಿ ಪಕ್ಷದ ಹೆಸರನ್ನು ತಲೈವಾ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಜಿನಿ ಮಕ್ಕಳ್ ಮಂದ್ರಮ್ ಸಂಘಟನೆಯನ್ನು 2017ರ ಡಿಸೆಂಬರ್ 31ರಂದು ಉದ್ಘಾಟಿಸಿ ರಾಜಕೀಯಕ್ಕೆ ರಜಿನಿ ಪ್ರವೇಶ ನೀಡಿದ್ದಾರೆ. ಆದರೆ ಇದುವರೆಗೂ ಪಕ್ಷದ ಹೆಸರು ಮಾತ್ರ ಘೋಷಣೆ ಮಾಡಿಲ್ಲ. ಈ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದ ರಜಿನಿ ಅಭಿಮಾನಿಗಳಿಗೆ ಇದೀಗ ಖಷಿಯ ವಿಚಾರವೊಂದ ಬಂದಿದ್ದು, ಏಪ್ರಿಲ್ 14ರ ನಂತರ ಯಾವುದೇ ಸಮಯದಲ್ಲೂ ಪಕ್ಷದ ಹೆಸರು ಬಹಿರಂಗವಾಗಬಹುದು ಎಂದು ರಜಿನಿ ಮಕ್ಕಳ್ ಮಂದ್ರಮ್ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಹೇಳಿದ್ದಾರೆ.
ಚೆನ್ನೈ ಮೂಲದ ಆರ್ಆರ್ಎಸ್ ನಾಯಕ ಎಸ್ ಗುರುಮೂರ್ತಿಯ ಪ್ರಭಾವದಿಂದಾಗಿ ರಜಿನಿಕಾಂತ್ ಅವರು ಬಿಜೆಪಿ ಕಡೆ ಒಲವು ಹೊಂದಿದ್ದಾರೆ ಎಂದು ಅನೇಕರು ನಂಬಿದ್ದಾರೆ. ರಜಿನಿ ಅವರ ದಿನನಿತ್ಯದ ರಾಜಕೀಯ ವ್ಯವಹಾರಗಳಲ್ಲಿ ತಮಿಳರುವಿ ಮಣಿಯನ್ ರಾಜಕೀಯ ತಂತ್ರಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ನಂಬಲಾಗಿದೆ.
ಹೆಸರು ಹೇಳಲು ಇಚ್ಛಿಸದ ಕೆಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಿರುವ ಮಣಿಯನ್, ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಎನ್ಡಿಎ ಮೈತ್ರಿಕೂಟವಾಗಿರುವ ಪಿಎಂಕೆ(ಪಟಾಲಿ ಮಕ್ಕಳ್ ಕಟ್ಚಿ) ರಜಿನಿಕಾಂತ್ ಜತೆಗಿರಲಿದೆ. ಅಲ್ಲದೆ, ಇನ್ನು ಹೆಚ್ಚಿನ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಕಾದಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಜತೆ ಮೈತ್ರಿ ಮಾಡಿಕೊಂಡಿ ಪಿಎಂಕೆ, ವಿಜಯಕಾಂತ್ ಅವರ ಡಿಎಂಡಿಕೆ ಮತ್ತು ವೈಕೋ ಅವರ ಎಂಡಿಎಂಕೆ ಶೇ.19ರಷ್ಟು ಮತ ಹಂಚಿಕೆಯನ್ನು ಪಡೆದುಕೊಂಡಿತ್ತು. ಈ ರೀತಿಯ ಮೈತ್ರಿ ನಮ್ಮದಾಗಿರಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಜತೆ ರಜಿನಿಕಾಂತ್ ಮೈತ್ರಿ ಮಾಡಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಲು ಇಚ್ಛಿಸದ ಮಣಿಯನ್, ಬಿಜೆಪಿ ಜತೆಗಿನ ಮೈತ್ರಿಯನ್ನು ರಜಿನಿ ಅವರೇ ನಿರ್ಧರಿಸಲಿದ್ದಾರೆ. ಆದರೆ, ಟಿಟಿವಿ ದಿನಕರನ್ ಅವರೊಂದಿಗಿನ ಮೈತ್ರಿಯನ್ನು ಕಡಿದುಕೊಂಡರೆ ಋಣಾತ್ಮಕ ಪ್ರಭಾವ ಬೀರಬಹುದೆಂಬ ಭೀತಿ ರಜಿನಿ ಅವರನ್ನು ಕಾಡುತ್ತಿದೆ ಎಂದು ಮಣಿಯನ್ ಹೇಳಿದ್ದಾರೆ.
ರಜಿನಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಿ, ಇರದಿರಲಿ ಆದರೆ, ಡಿಎಂಕೆ ಸೋಲಿಸಬೇಕೆಂಬ ಅವರ ಗುರಿಗೆ ಬಿಜೆಪಿ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅನೇಕ ರಾಜಕೀಯ ಚಟುವಟಿಕೆಗಳಲ್ಲಿ ರಜಿನಿ ತೊಡಗಿಸಿಕೊಂಡಿದ್ದು, ಏಪ್ರಿಲ್ನಲ್ಲಿ ಬಹುತೇಕ ಪಕ್ಷದ ಹೆಸರನ್ನು ಬಹಿರಂಗಪಡಿಸಲಿದ್ದರಾ ಎಂಬ ಕುತೂಹಲ ಮನೆ ಮಾಡಿದೆ. (ಏಜೆನ್ಸೀಸ್)