| ದೇವರಾಜ್ ಎಲ್. ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ಬ್ಯಾಂಕ್ಗಳ ಎಡವಟ್ಟಿನಿಂದಾಗಿ ಹಲವು ವಿದ್ಯಾರ್ಥಿಗಳ ಮೆಡಿಕಲ್ ಸೀಟು ಕೈತಪ್ಪಿ ಸಂಕಷ್ಟ ಅನುಭವಿಸುವಂತಾಗಿದೆ. ಬ್ಯಾಂಕ್ ವಿಲೀನದಿಂದ ಉಂಟಾದ ತಾಂತ್ರಿಕ ಸಮಸ್ಯೆಯೇ ಈ ಸಮಸ್ಯೆಗೆ ಮೂಲ ಕಾರಣ. ಕೆಲವೊಮ್ಮೆ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವಾಗ ತಾಂತ್ರಿಕ ಸಮಸ್ಯೆಯಿಂದ ಹಣ ಬಂದಿರುವುದೇ ಇಲ್ಲ. ಆದರೂ ಮೊಬೈಲ್ಗೆ ವಿತ್ ಡ್ರಾ ಆಗಿರುವ ಸಂದೇಶ ಬರುತ್ತದೆ. ಸ್ವಲ್ಪ ಸಮಯದ ಬಳಿಕ ಮತ್ತೆ ಅದೇ ಹಣ ತಾನಾಗಿಯೇ ಕ್ರೆಡಿಟ್ ಆಗುತ್ತದೆ. ಇಂತಹದ್ದೇ ಸಮಸ್ಯೆ ಇಲ್ಲಿಯೂ ಆಗಿದೆ. ಬ್ಯಾಂಕ್ನಿಂದ ಕೆಇಎಗೆ ತಲುಪಬೇಕಾದ ಹಣ ತಲುಪದೇ ಇದ್ದ ಕಾರಣ ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿಲ್ಲವೆಂದು ಕೆಲವು ವಿದ್ಯಾರ್ಥಿಗಳ ಸೀಟುಗಳೇ ರದ್ದಾಗಿವೆ. ಸದ್ಯ ಯೂನಿಯನ್ ಬ್ಯಾಂಕ್ನಲ್ಲಿ ಎರಡು ಬ್ಯಾಂಕ್ಗಳು ವಿಲೀನವಾಗಿದೆ. ಈ ವೇಳೆ ಆನ್ಲೈನ್ ಪೇಮೆಂಟ್ನಲ್ಲಿ ವ್ಯತ್ಯಾಸವಾಗಿದೆ.
ಇದು ಕೆಇಎ ಬ್ಯಾಂಕ್ ಖಾತೆಯ ತಪ್ಪು. ಸಮಸ್ಯೆ ಸರಿ ಪಡಿಸುವಂತೆ ಕೆಇಎ ಕಚೇರಿಗೆ ಹೋದರೆ ಗೇಟಿನಲ್ಲಿರುವ ಭದ್ರತಾ ಸಿಬ್ಬಂದಿ ಅಧಿಕಾರಿಗಳನ್ನು ಭೇಟಿ ಮಾಡುವುದಕ್ಕೆ ನಿರಾಕರಿಸಿ ಸಾಕಷ್ಟು ಸಮಯದ ನಂತರ ಅವಕಾಶ ನೀಡಿದ್ದಾರೆ. ಆನಂತರ ಕೆಇಎ ಅಧಿಕಾರಿಗಳಿಗೆ ಸಮಸ್ಯೆಯನ್ನು ತಿಳಿಸಿ ದಾಖಲೆ ಸಹಿತ ದೂರು ನೀಡಿದ್ದೇವೆಂದು ಮಂಗಳೂರಿನ ಪಾಲಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ಪ್ರಕರಣ 1
ಮಂಗಳೂರು ಮೂಲದ ವಿದ್ಯಾರ್ಥಿಗೆ ಖಾಸಗಿ ಕಾಲೇಜೊಂದರಲ್ಲಿ ವೈದ್ಯಕೀಯ ಪ್ರವೇಶಕ್ಕೆ ಸೀಟು ಸಿಕ್ಕಿದೆ. ಇದನ್ನು ಖಚಿತ ಪಡಿಸಿಕೊಂಡ ಆತ ಶುಲ್ಕ ಪಾವತಿಸುವುದಕ್ಕಾಗಿ ಚಲನ್ ಡೌನ್ಲೋಡ್ ಮಾಡಿಕೊಂಡು ಸಿದ್ಧನಾಗಿದ್ದ. ಕೆಇಎ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವುದರಿಂದ ವಿದ್ಯಾರ್ಥಿ ಎಸ್ಬಿಐ ಬ್ಯಾಂಕ್ನಲ್ಲಿರುವ ತಮ್ಮ ತಂದೆಯ ಖಾತೆಯಿಂದ ಆರ್ಟಿಜಿಎಸ್ ಮೂಲಕ 9,94,406 ರೂ. ವರ್ಗಾಯಿಸಿದ್ದಾನೆ. ದಾಖಲಾತಿ ಪರಿಶೀಲನೆ ನಂತರ ಸಂಜೆ ವೇಳೆ ಬ್ಯಾಂಕ್ನಿಂದ ಮೊಬೈಲ್ಗೆ ಸಂದೇಶ ಬಂದಿದ್ದು, ಕಡಿತವಾಗಿದ್ದ ಹಣ ನಿಮ್ಮ ಖಾತೆಗೆ ಮರಳಿ ಕ್ರೆಡಿಟ್ ಮಾಡಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ ಯೂನಿಯನ್ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದಾಗಿ ಸಮಸ್ಯೆ ಎದುರಾಗಿದೆ ಎಂಬುದು ಖಚಿತವಾಗಿದೆ. ಶುಲ್ಕ ಪಾವತಿಗೆ ಡಿ.15 ಕೊನೆಯ ದಿನವಾಗಿತ್ತು. ಮರಳಿ ಶುಲ್ಕ ಪಾವತಿಸಲು ಅವಕಾಶ ಇಲ್ಲದೆ ಸೀಟು ರದ್ದಾಗಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ವಿದ್ಯಾರ್ಥಿ ಎಸ್ಬಿಐ ಬ್ಯಾಂಕ್ನಿಂದ ಪತ್ರ ಪಡೆದು ಕೆಇಎಗೆ ಸಲ್ಲಿಸಿದ್ದಾರೆ. ಆದರೆ, ಇನ್ನೂ ಕೆಇಎ ವಿಚಾರಣೆಯಲ್ಲಿಟ್ಟಿದೆ.
ಪ್ರಕರಣ 2
ಬೆಳ್ತಂಗಡಿಯ ಒಬ್ಬರಿಗೆ ಇದೇ ರೀತಿ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದೆ. ಅಭ್ಯರ್ಥಿಯ ಪಾಲಕರು ಶುಲ್ಕ ಪಾವತಿಸಿದ್ದು, ಖಾತೆಯಿಂದ ಹಣ ಕಡಿತವಾಗಿದೆ. ಆದರೆ, ಕೆಇಎ ಖಾತೆಗೆ ಹಣ ಜಮ ಆಗಿಲ್ಲ. ಪಾಲಕರ ಖಾತೆಗೆ ಕಡಿತವಾಗಿರುವ ಸಂದೇಶ ಬಂದಿದ್ದು ಹೊರತು ಪಡಿಸಿದರೆ ಹಣ ಮರಳಿ ಕ್ರೆಡಿಟ್ ಸಹ ಆಗಲಿಲ್ಲ. ಈ ವಿಚಾರವನ್ನು ಕೆಇಎ ಗಮನಕ್ಕೆ ತಂದಿದ್ದಾರೆ. ಕೆಇಎ ಪಟ್ಟಿಯ ಪ್ರಕಾರ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಶುಲ್ಕ ಪಾವತಿಸಿಲ್ಲ ಮತ್ತು ಪ್ರವೇಶ ಪತ್ರ ಡೌನ್ಲೋಡ್ ಮಾಡಿಲ್ಲ. ಇದರಲ್ಲಿ ಬಹುತೇಕ ಪ್ರಕರಣಗಳು ಈ ರೀತಿಯಾಗಿರುವುದು ಪಾಲಕರು ಕೆಇಎಗೆ ಬಂದು ತಿಳಿಸಿದಾಗಲಷ್ಟೇ ಬೆಳಕಿಗೆ ಬರಲಿದೆ.
ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ
ಡ್ರಗ್ಸ್ ಕೇಸ್ನಲ್ಲಿ ನಟರನ್ನೇಕೆ ಬಂಧಿಸಿಲ್ಲ? ಅಸಮಾಧಾನ ಹೊರಹಾಕಿದ ಇಂದ್ರಜಿತ್ ಲಂಕೇಶ್