ನವದೆಹಲಿ: ಸಹಪಾಠಿಯೊಂದಿಗೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ 12ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಕೈ ಬೆರಳುಗಳನ್ನು ಕತ್ತರಿಸಿ ವಿಕೃತಿ ಮೆರೆದಿರುವ ಘಟನೆ ರಾಷ್ಟ್ರ ರಾಜದ್ಥಾನಿ ನವದೆಹಲಿಯ ದಕ್ಷಿಣ ದ್ವಾರಕಾದಲ್ಲಿ ನಡೆದಿದೆ.
ಘಟನೆ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಸಂತ್ರಸ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ; ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಘಟನೆ ಅಕ್ಟೋಬರ್ 21ರಂದು ನಡೆದಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿ ಹೆದರಿ ಮನೆಯಲ್ಲಿ ಈ ವಿಚಾರವನ್ನು ಹೇಳಿರಲಿಲ್ಲ. ಒಮ್ಮೆ ಆತನ ಪೋಷಕರು ಈ ಬಗ್ಗೆ ವಿಚಾರಸಿದಾಗ ಆತ ಮೋಟಾರ್ ಸೈಕಲ್ ಚೈನಿನಿಂದ ಬೆರಳುಗಳು ತುಂಡಾಗಿದ್ದಾಗಿ ಹೇಳಿದ್ದಾನೆ.
ಬಳಿಕ ಕುಟುಂಬದವರ ಒತ್ತಡಕ್ಕೆ ಮಣಿದ ಸಂತ್ರಸ್ತ ಶುಕ್ರವಾರ ಸಂಜೆ ನಡೆದ ಘಟನೆ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದಾನೆ. ಬಳಿಕ ದೂರು ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ FIR ದಾಖಲಾಗಿದ್ದು ಶೀಘ್ರದಲ್ಲೇ ಆರೋಪಿ ವಿರುದ್ಧ ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.