ರಾಯಬಾಗ: ಪ್ರಯಾಣಿಕರಿಗೆ ವಿಶ್ರಾಂತಿ ತಾಣವಾಗಬೇಕಿದ್ದ ತಾಲೂಕಿನ ಭಿರಡಿ ಗ್ರಾಮದ ಬಸ್ ನಿಲ್ದಾಣ, ಅವ್ಯವಸ್ಥೆಯ ತಾಣವಾಗಿದೆ. ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ. ಅಷ್ಟೇ ಅಲ್ಲ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿದೆ.
ಕಸ ಹಾಗೂ ಕುಡುಕರು ಬಿಸಾಕಿದ ಮದ್ಯದ ಟೆಟ್ರಾ ಪ್ಯಾಕೆಟ್ಗಳಿಂದ ತಂಗುದಾಣ ತುಂಬುತ್ತಿದೆ. ಹಂದಿ, ನಾಯಿ ವಾಸ ಸ್ಥಳವಾಗಿ, ಗಲೀಜುಗೊಂಡಿದೆ. ಮೇಲ್ಚಾವಣಿ ಬಿರುಕು ಬಿಟ್ಟಿದ್ದು, ಯಾವ ಹೊತ್ತಿನಲ್ಲಾದರೂ ಬೀಳುವ ಹಂತದಲ್ಲಿದೆ. ತಂಗುದಾಣದ ಸುತ್ತಲೂ ಗಲೀಜು ನೀರು ಹರಿಯುತ್ತಿದೆ. ಇದರಿಂದ ಪ್ರಯಾಣಿಕರು ಮೂಗುಮುಚ್ಚಿಕೊಂಡು ಬಸ್ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಸುತ್ತಲಿನ ನಿವಾಸಿಗಳು ಈ ಅವ್ಯವಸ್ಥೆಯಿಂದ ರೋಸಿ ಹೋಗಿದ್ದು, ರೋಗ ರುಜಿನಗಳು ಹರಡುತ್ತವೆಯೋ ಏನೋ ಎಂಬ ಆತಂಕದಲ್ಲಿದ್ದಾರೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಗಲಿ ಬಸ್ ತಂಗುದಾಣದತ್ತ ಗಮನ ಹರಿಸದಿರುವುದು ವಿಪರ್ಯಾಸ. ತಂಗುದಾಣವನ್ನು ಸ್ವಚ್ಛತೆಗೊಳಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಭಿರಡಿ ಗ್ರಾಮದ ಬಸ್ ತಂಗುದಾಣದಲ್ಲಿ ಮದ್ಯ ವ್ಯಸನಿಗಳು ಮದ್ಯದ ಬಾಟಲ್, ಪಾಕೆಟ್ ಬೀಸಾಕಿ ಗಲೀಜು ಮಾಡಿದ್ದಾರೆ. ಇಲ್ಲಿ ಹಂದಿ, ನಾಯಿಗಳು ಮಲ ವಿರ್ಸಜನೆ ಮಾಡುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಂಗುದಾಣವನ್ನು ಸ್ವಚ್ಛಗೊಳಿಸಿಲು ಕ್ರಮ ಕೈಗೊಳ್ಳಬೇಕು. ಬೀಳುವ ಸ್ಥಿತಿಯಲ್ಲಿರುವ ಬಸ್ ತಂಗುದಾಣವನ್ನು ಹೊಸದಾಗಿ ನಿರ್ಮಿಸಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು.
| ನಿಂಗಪ್ಪ ಹೆಗಲೆ ಗ್ರಾಮಸ್ಥ
ಭಿರಡಿ ಗ್ರಾಮದ ಬಸ್ ತಂದುದಾಣವನ್ನು ಪಂಚಾಯಿತಿ ಸಿಬ್ಬಂದಿ ಪ್ರತಿವಾರ ಸ್ವಚ್ಛಗೊಳಿಸುತ್ತಾರೆ. ತಂಗುದಾಣವನ್ನು ನೆಲಸಮ ಮಾಡಿ, ಮುಂದಿನ 15ನೇ ಹಣಕಾಸು ಯೋಜನೆಯಲ್ಲಿ ಹೊಸ ಬಸ್ ತಂಗುದಾಣ ಕಟ್ಟಡ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
| ಸಂಗಮೇಶ ನ್ಯಾಮಗೌಡ ಪಿಡಿಒ ಭಿರಡಿ ಗ್ರಾಪಂ
| ಸುಧೀರ ಎಂ. ಕಳ್ಳೆ ರಾಯಬಾಗ