ಶಿವಮೊಗ್ಗ: ಯಶಸ್ಸಿಗೆ ಪರಿಶ್ರಮ ಅವಶ್ಯ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಆಲೋಚನೆಯು ವ್ಯಕ್ತಿಯನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು.
ಡಿವಿಎಸ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಸ್ನೇಹಿತರ ಸಹವಾಸ ಮಾಡಬೇಕು. ತಪ್ಪು ದಾರಿಗೆ ಕೊಂಡೊಯ್ಯುವ ನಕಾರಾತ್ಮಕ ಅಂಶಗಳಿಂದ ದೂರವಿರಬೇಕು. ಕೆಟ್ಟ ಹವ್ಯಾಸ ಒಳಿತಲ್ಲ. ಸಾಧನೆಯ ಬಗ್ಗೆಯೇ ಚಿಂತನೆ ನಡೆಸಬೇಕು ಎಂದರು.
ಬಿಇಒ ಪಿ.ನಾಗರಾಜ್ ಮಾತನಾಡಿ, ಪ್ರತಿಯೊಬ್ಬರಿಗೂ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಅತ್ಯಂತ ಮುಖ್ಯ. ಆರಂಭಿಕ ಹಂತದಲ್ಲಿ ಕಲಿಯುವ ಶಿಕ್ಷಣ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ ಅಂಶಗಳನ್ನು ಒಳಗೊಂಡಿರುವ ಶಿಕ್ಷಣ ನೀಡುವ ಕಾರ್ಯ ಡಿವಿಎಸ್ನಿಂದಾಗಿದೆ ಎಂದರು.
ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡಿದ್ದಾರೆ. ಸಾಧಕರ ಜೀವನವೇ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಅಧ್ಯಕ್ಷ ಕೆ.ಎನ್.ರುದ್ರಪ್ಪ, ಕಾರ್ಯದರ್ಶಿ ಎಸ್.ರಾಜಶೇಖರ್, ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್, ಹಿರಿಯ ಶಿಕ್ಷಕರಾದ ಜಿ.ಎಸ್.ವೆಂಕಟೇಶ್, ಎಸ್.ಕೇಶವಪ್ರಸಾದ್, ದಾದಾಪೀರ್ ಇತರರಿದ್ದರು.