More

    ಮತದಾನ ಸಮೀಪಿಸುತ್ತಿರುವುದರಿಂದ ಕಾರ್ಯಪ್ರೌವೃತ್ತರಾಗಿ ಆಮಿಷ ತಡೆಯಿರಿ: ರಾಜ್ಯದ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ ಸೂಚನೆ

    ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳಿವೆ. ಈ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಎಫ್.ಎಸ್.ಟಿ ತಂಡ ಸದಾ ಕಾರ್ಯಪ್ರವೃತ್ತರಾಗಿರಬೇಕು ಎಂದು ರಾಜ್ಯದ ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿಕುಮಾರ ಸೂಚನೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಫ್‌ಎಸ್‌ಟಿ ತಂಡದ ವಾಹನಕ್ಕೆ ಜಿಪಿಎಸ್ ಅಳವಡಿಸಿ. ಅವರ ವಾಹನ ಚಾಲನೆಯ ಸ್ಥಳಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದ ನಿಗಾ ವಹಿಸಲಾಗುತ್ತಿದೆ. ಈ ವಾಹನಗಳು ಅರ್ಧ ಗಂಟೆಯಿಂದ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ನಿಂತರೆ ತಕ್ಷಣ ಕರೆ ಮಾಡಿ ಕಾರಣ ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದರು.
    ಚೆಕ್‌ಫೋಸ್ಟ್‌ಗಳಲ್ಲಿ ಹೊರ ಜಿಲ್ಲೆಯಿಂದ ಅಕ್ರಮವಾಗಿ ಸಾಗಾಣಿಕೆಯಾಗುವ ಹಣ ಮತ್ತು ವಸ್ತುಗಳ ಮೇಲೆ ನಿಗಾ ವಹಿಸಬಹುದು. ಜಿಲ್ಲೆಯ ಒಳಭಾಗದಲ್ಲಿ ಸಾಗಾಣಿಕೆಯಾಗುವ ಹಣ ಮತ್ತು ವಸ್ತುಗಳ ಮೇಲೆ ಸ್ಥಳೀಯ ಪೊಲೀಸ್, ಎಫ್‌ಎಸ್‌ಟಿ ತಂಡಗಳು ನಿಗಾ ವಹಿಸಬೇಕು. ವಿಧಾನಸಭಾ ಕ್ಷೇತ್ರವಾರು ರಚನೆಯಾಗಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮೇಲ್ವಿಚರಣಾ ತಂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪ್ರತಿ ವೆಚ್ಚವನ್ನು ಲೆಕ್ಕಕ್ಕೆ ಸೇರಿಸಿ ವರದಿ ನೀಡಬೇಕು. ಮತದಾನ ಪ್ರಾರಂಭವಾಗುವ 72 ಗಂಟೆ ಅವಧಿಯಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರವಹಿಸಿ ಎಂದರು.
    ಚುನಾವಣಾ ವೆಚ್ಚ ವೀಕ್ಷಕರಾದ ರೋಹಿತ್ ಅಸುದಾನಿ ಹಾಗೂ ಕುಮಾರ್ ಪ್ರಿಯತಮ್ ಅಶೋಕ್ ಮಾತನಾಡಿ, ಈಗಾಗಲೇ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಎರಡು ಬಾರಿ ಚುನಾವಣಾ ವೆಚ್ಚವನ್ನು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ತಂಡಗಳು, ಚೆಕ್‌ಫೋಸ್ಟ್, ವಶಪಡಿಸಿಕೊಂಡಿರುವ ನಗದು, ಮದ್ಯ ಹಾಗೂ ಇನ್ನಿತರೆ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಚಂದ್ರಶೇಖರ್ ಇತರರಿದ್ದರು. ಸಭೆ ನಂತರ ವಿಶೇಷ ಚುನಾವಣಾ ವೆಚ್ಚ ವೀಕ್ಷಕರು ಕಂಟ್ರೋಲ್ ರೂಂ, ಮೀಡಿಯಾ ಮಾನಿಟರಿಂಗ್ ಸೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts