ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ನಲ್ಲಿ ಮಿರ್ಚಿ ಮಂಡಕ್ಕಿ ಖಾರಾನೂ ಇಲ್ಲ, ಶಕ್ತಿನೂ ಇಲ್ಲ ಹಾಗೂ ಹಣನೂ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಪ ಯಡಿಯೂರಪ್ಪ ಅವರು ಬಹಳ ಹುರುಪಿನಿಂದ ಸರ್ಕಾರ ಮಾಡಿದರು. ಆದರೆ, ಅದೇ ಹುರುಪಿನಲ್ಲಿ ಬಜೆಟ್ ಮಾಡಲಾಗಿಲ್ಲ. ನನ್ನ ಕೈಯಲ್ಲಿ ಒಳ್ಳೆಯ ಬಜೆಟ್ ಕೊಡಲಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೇಂದ್ರದ ಜಿಎಸ್ಟಿ ಫೇಲ್ ಆಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಬಿಎಸ್ವೈ ಮಂಡಿಸಿದ ಬಜೆಟ್ಗೆ ನಾನ್ಯಾಕೆ ಅಂಕ ಕೊಡಲಿ, ಜನರೇ ಕೊಡುತ್ತಾರೆ: ಮಾಜಿ ಸಿಎಂ ಎಚ್ಡಿಕೆ
ಪಾಪ ಬಿಎಸ್ವೈ ಅವರಿಗೂ ಮಾತಾಡಲು ಶಕ್ತಿ ಕಾಣುತ್ತಿಲ್ಲ. ಯಾವ ಹುರುಪಿನಲ್ಲಿ ಸರ್ಕಾರ ಮಾಡಿದರೂ, ಅದೆಲ್ಲ ಈಗ ಕಾಣ್ತಿಲ್ಲ. ಹಳೆಯ ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ, ಆ ಬಜೆಟ್ ಅನ್ನು ಮೀರಿಸಿದ ದುರ್ಬಲ ಬಜೆಟ್ ಇದಾಗಿದೆ. ಒಂದು ಹೊಸ ಪಾಲಿಸಿಯನ್ನು ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಹಾಗೂ ರಾಜ್ಯ ಸೇರಿ ಏನಾದರೂ ಮಾಡುತ್ತಾರೆ ಅಂದುಕೊಂಡಿದ್ದೆ. ಹಸಿರು ಶಾಲು ಹಾಕಿಕೊಂಡರೆ ರೈತರ ಬಜೆಟ್ ಆಗುವುದಿಲ್ಲ. ಈ ಬಜೆಟ್ನಲ್ಲಿ ಶಕ್ತಿನೂ ಇಲ್ಲ, ಹಣನೂ ಇಲ್ಲ. ಒಂದು ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ದಿಕ್ಕು ದೆಸೆ ಇಲ್ಲದ ಬಜೆಟ್ ಎಂದು ಡಿಕೆಶಿ ಲೇವಡಿ ಮಾಡಿದರು. (ದಿಗ್ವಿಜಯ ನ್ಯೂಸ್)