ಬೆಂಗಳೂರು: ಲಾಕ್ಡೌನ್ ಮುಗಿದ ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡುತ್ತೇವೆ. ಖಂಡಿತವಾಗಿ ಪರೀಕ್ಷೆಯನ್ನು ನಡೆಸುತ್ತೇವೆ. ಇದು ವಿದ್ಯಾರ್ಥಿಗಳ ಬೇಡಿಕೆಯು ಸಹ ಆಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದರು.
ಮಂಗಳವಾರ ದಿಗ್ವಿಜಯ ನ್ಯೂಸ್ನೊಂದಿಗೆ ಮಾತನಾಡಿದ ಅವರು ಮಾರ್ಚ್ 24ರಂದು ಲಾಕ್ಡೌನ್ ಘೋಷಣೆ ಆಯಿತು. ಹೀಗಾಗಿ ಪರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ. ಇಂದು ದೇಶದಲ್ಲೇ ವಿಚಿತ್ರವಾದ ಪರಿಸ್ಥಿತಿ ಇದೆ. ಕರೊನಾ, ಕೋವಿಡ್, ಕೆಂಪು, ಹಸಿರು, ಕಿತ್ತಳೆ ವಲಯ ಹಾಗೂ ಕಂಟೇನ್ಮೆಂಟ್ ಝೋನ್ ಎಂಬ ಪದಗಳೇ ಇನ್ನು ಓಡಾಡುತ್ತಿದ್ದೆ. ಇಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಪರೀಕ್ಷೆ ಮಾಡುವುದು ಸರಿಯಲ್ಲ. ಸದ್ಯಕ್ಕಂತೂ ಅದು ನಡೆಯುವುದಿಲ್ಲ. ಲಾಕ್ಡೌನ್ ಮುಗಿದ ಬಳಿಕ ನಿರ್ಧಾರ ಮಾಡಲಾಗುವುದು ಎಂದರು.
ಇದನ್ನೂ ಓದಿ: ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್ಸ್ಪಾಟ್ ಆಯಿತೇ? ಫ್ಯಾಕ್ಟ್ಚೆಕ್ನಲ್ಲಿ ಸತ್ಯಾಂಶ ಬಯಲು!
ಎಲ್ಲೇ ಹೋದರು ಮಕ್ಕಳು ಕೇಳುವುದು ಒಂದೇ ಪ್ರಶ್ನೆ, ಪರೀಕ್ಷೆ ದಿನಾಂಕ ಯಾವಾಗ ಘೋಷಣೆ ಮಾಡುತ್ತೀರಾ ಎಂಬುದು. 1 ರಿಂದ 9ನೇ ತರಗತಿಯವರೆಗೆ ಪರೀಕ್ಷೆಯಿಲ್ಲದೇ ಪಾಸ್ ಮಾಡಿದ ರೀತಿಯಲ್ಲೇ ನಿಮ್ಮನ್ನು ಪಾಸ್ ಮಾಡಬಹುದೇ ಎಂದು ಕೇಳಿದ್ದಕ್ಕೆ, ಅದಕ್ಕೆ ವಿದ್ಯಾರ್ಥಿಗಳು ಸಿದ್ಧರಿಲ್ಲ. ಪರೀಕ್ಷೆಯೇ ಬೇಕೆಂದು ಕೇಳಿಕೊಂಡಿದ್ದಾರೆ. ಒಂದು ವೇಳೆ ಪರೀಕ್ಷೆಯ ಬರೆಯದೇ ಪಾಸ್ ಆದರೆ, ಕರೊನಾ ಪಾಸ್ ಎಂಬ ಹೆಸರು ಎಂದಿಗೂ ಉಳಿದುಬಿಡುತ್ತದೆ. ಹೀಗಾಗಿ ಪರೀಕ್ಷೆ ನಡೆಸಿ ಎಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಜಿಲ್ಲೆಗಳ ಡಿಡಿಪಿಐ ಸಭೆ ನಡೆಸಿದ್ದೇವೆ. ಪರೀಕ್ಷೆ ನಡೆಸಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಹೀಗಾಗಿ ಎಲ್ಲ ಸಿದ್ಧತೆಗಳನ್ನು ಆರಂಭಿಸಲು ಈಗಾಗಲೇ ಸೂಚನೆ ನೀಡಿದ್ದೇವೆ. ಚಂದನ ಟಿವಿಯಲ್ಲಿ ಪುನರ್ಮನನ ತರಗತಿಯೂ ನಡೆಯುತ್ತಿದೆ. ಇದು ಮುಗಿಯಲು ಇನ್ನು ಸಮಯ ತೆಗದುಕೊಳ್ಳುತ್ತದೆ. ಅಲ್ಲದೆ, ಇಂಗ್ಲಿಷ್ ತರಗತಿ ಆರಂಭಿಸುವಂತೆಯೂ ಒತ್ತಾಯ ಮಾಡುತ್ತಿದ್ದಾರೆ. ಅದು ಆರಂಭವಾದರೆ, ಇನ್ನು ಸಮಯ ಹಿಡಿಯುವುದರಿಂದ ಜೂನ್ ತಿಂಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ. ಎಲ್ಲಾ ಸುರಕ್ಷಿತ ಕ್ರಮವನ್ನು ತೆಗೆದುಕೊಂಡೇ ಪರೀಕ್ಷೆಯನ್ನು ನಡೆಸುತ್ತೇವೆ. ವಿದ್ಯಾರ್ಥಿಗಳ ಕ್ಷೇಮವೇ ನಮಗೆ ಮುಖ್ಯವೆಂದರು.
ಇದನ್ನೂ ಓದಿ: ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ನಡೆದೇ ಹೋಯ್ತು ಸ್ನೇಹಿತನ ಬರ್ಬರ ಹತ್ಯೆ
ನಾವು ಏನೇ ಮಾಡಿದರೂ 20 ದಿನಗಳಿಗೂ ಮುಂಚೆ ತಿಳಿಸುತ್ತೇವೆ. ಶಾಲೆಗಳಲ್ಲೂ ಪುನರ್ಮನನಕ್ಕೆ ಒಂದು ವಾರ ಅವಕಾಶ ಕೊಡುತ್ತೇವೆ. ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಸಮಯ ಕೊಟ್ಟು ಪರೀಕ್ಷೆ ಮಾಡ್ತೀವಿ. ಏಕಾಏಕಿ ಪರೀಕ್ಷಾ ದಿನಾಂಕ ಘೋಷಣೆ ಮಾಡಲ್ಲ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)
ದೇಗುಲಗಳನ್ನು ತೆರೆಯಲು ಶೀಘ್ರದಲ್ಲೇ ಸಿಗಲಿದೆ ಅನುಮತಿ? ಮುಜರಾಯಿ ಸಚಿವರು ಹೀಗೆ ಹೇಳಿದ್ದಾರೆ…