ಗುಂಡ್ಲುಪೇಟೆ: ಎಸ್ಎಸ್ಎಲ್ಸಿ ಪರೀಕ್ಷೆಯ ವೇಳಾಪಟ್ಟಿ ಸೋಮವಾರ ಪ್ರಕಟವಾಗುವ ನಿರೀಕ್ಷೆ ಇದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಅಂದು ಬೆಂಗಳೂರಿನಲ್ಲಿ ಶಿಕ್ಷಣ ತಜ್ಞರೊಂದಿಗೆ ಸಭೆ ನಡೆಯಲಿದ್ದು ಅಂದೇ ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿದರು.ಪರೀಕ್ಷೆ ನಡೆಸಲು ಸರ್ಕಾರಕ್ಕೆ ಮನಸ್ಸಿದೆ. ಆದರೆ ಯಾವ ರೀತಿ ಪರೀಕ್ಷೆ ನಡೆಸಬೇಕೆಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದಲೇ ತಜ್ಞರ ಸಭೆ ಕರೆಯಲಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶಾರೀರಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಜಾಸ್ತಿ ಮಾಡಬೇಕಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್ ನೀಡಬೇಕಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಪುನರಾರಂಭಿಸಲು ಬಿಎಂಆರ್ಸಿಎಲ್ ಸರ್ವಸನ್ನದ್ಧ
ದೂರದರ್ಶನದಲ್ಲಿ ಎಸ್ಎಸ್ಎಲ್ಸಿ ಪುನರ್ಮನನ ತರಗತಿ ನಡೆಸುತ್ತಿರುವುದಕ್ಕೆ ಜನ ಬೆಂಬಲಿಸುತ್ತಿದ್ದಾರೆ. ಹಾಗಾಗಿ ಶಿಕ್ಷಣ ಇಲಾಖೆಯಿಂದಲೇ ಹೊಸ ಚಾನೆಲ್ ಶುರು ಮಾಡುವ ಯೋಚನೆ ಬಂದಿದೆ ಎಂದರು.
ಈ ಸಲ ಶೈಕ್ಷಣಿಕ ವರ್ಷ ಎಷ್ಟು ಅವಧಿ ಕಡಿತವಾಗಲಿದೆಯೋ ಗೊತ್ತಿಲ್ಲ. ಅವಧಿ ಕಡಿತಕ್ಕೆ ಪೂರಕವಾಗಿ ಪಠ್ಯವೂ ಕಡಿಮೆಯಾಗಲಿದೆ. ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.