ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ 68ನೇ ಜನ್ಮ ದಿನೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜ.7 ರಂದು ಬೆಳಗ್ಗೆ 11ಗಂಟೆಗೆ ತೆಲಂಗಾಣ ರಾಜ್ಯದ ಕೊಲನುಪಾಕ (ಕೊಲ್ಲಿಪಾಕಿ) ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಲೇರು ಕ್ಷೇತ್ರದ ಶಾಸಕ ಬೀರ್ಲಾ ಐಲಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅರಣ್ಯ, ಜೀವಿಶಾಸ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ರಂಭಾಪುರಿ ಬೆಳಗು ಮಾಸಿಕ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ನಿವತ್ತ ಐಪಿಎಸ್ ಅಧಿಕಾರಿ ಜ್ಯೋತಿಪ್ರಕಾಶ ಮಿರ್ಜಿ ಹಾಗೂ ಕೊಲನಪಾಕ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸುವರು.
ಐದು ದಿನಗಳ ದಾಸೋಹ ಹಾಗೂ ಸೇವಾರ್ಥಿಗಳಿಗೆ ಗುರುರಕ್ಷೆ ನೀಡುವ ಸೇವೆಯನ್ನು ಕಲಬುರಗಿಯ ಸಮಾಜ ಸೇವಕ ಗಿರಿಯಪ್ಪ ಮುತ್ಯಾ ನಿರ್ವಹಿಸುವರು. ಜ. 3ರಿಂದ 6ರ ವರೆಗಿನ ಪೂಜಾ ಸೇವಾಕರ್ತರಾಗಿ ಬೆಂಗಳೂರಿನ ಚಂದ್ರಶೇಖರ ನಾಗರಾಳಮಠ, ಚಿಟಗುಪ್ಪದ ಮಲ್ಲಿಕಾರ್ಜುನ ಉಣ್ಣೆ, ಭಾಲ್ಕಿಯ ಚನ್ನಬಸವಣ್ಣ ಬಳಕೆ, ಬೆಂಗಳೂರಿನ ಬೀರೂರು ಶಿವಸ್ವಾಮಿ, ಹೈದರಾಬಾದ್ನ ಎಮ್.ವೀರಮಲ್ಲೇಶ, ರಾಮ್ ರೆಡ್ಡಿ, ವಿಜಯಕುಮಾರ ಹೆರೂರು ಹಾಗೂ 7ರಂದು ಶಿವಾಚಾರ್ಯರ ಸಮೂಹ ಪಾಲ್ಗೊಳ್ಳುವರು.
ಜ.5 ರಂದು ವಿಜಯನಗರ ಜಿಲ್ಲೆ ಹರಪನಹಳ್ಳಿ ಸದ್ಭಕ್ತರಿಂದ ಶ್ರೀ ವೀರಭದ್ರಸ್ವಾಮಿ ಗುಗ್ಗುಳ ಮಹೋತ್ಸವ ಜರುಗುವುದು. ಜ. 3 ರಿಂದ 7ರ ವರೆಗೆ ಶ್ರೀರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸುವರು. ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂಗಸುಗೂರು ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು ಹಾಗೂ ಶ್ರೀ ಜಗದ್ಗುರು ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ ಈ ಎಲ್ಲ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುವರು.