ಗುಂಡ್ಲುಪೇಟೆ: ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಶ್ರೀಮಹದೇಶ್ವರ ಕೊಂಡ ಹಾಗೂ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.
ಪ್ರತಿ ವರ್ಷವೂ ಫಲ್ಗುಣಿ ಮಾಸದ ಶಿವರಾತ್ರಿ ನಂತರ 9ನೇ ದಿನ ನಡೆಯುವ ಜಾತ್ರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬ ಹೆಸರಾಗಿದೆ. ಮಂಗಳವಾರದಿಂದಲೇ ದೇವರಿಗೆ ಅಭಿಷೇಕ, ಹಾಲರವಿ, ವೀರಗಾಸೆ, ಬಿರುದು ಬಾವಲಿಗಳು ಹಾಗೂ ಮಂಗಳವಾದ್ಯ ಸಮೇತ ಬಂದು ದೇವರಿಗೆ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಗ್ರಾಮಸ್ಥರು ಸೇರಿ ದೇವಾಲಯದ ಬಳಿ ನಿರ್ಮಿಸಿದ್ದ ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮದ ದೇವತೆಗಳಾದ ಸಿದ್ದಪ್ಪಾಜಿ, ಶ್ರೀಬಸವೇಶ್ವರರ ಉತ್ಸವ ಮೂರ್ತಿಗಳನ್ನು ವೀರಗಾಸೆ, ಛತ್ರಿ, ಚಾಮರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡಲಾಯಿತು.
ಅಹೋರಾತ್ರಿ ನಡೆದ ಉತ್ಸವ ದೇವಾಲಯದ ಬಳಿ ಬರುತ್ತಿದ್ದಂತೆ ಬುಧವಾರ ನಸುಕಿನಲ್ಲಿ ಪ್ರಧಾನ ಅರ್ಚಕ ನಂದೀಶ್ ಕೊಂಡ ಹಾಯ್ದರು. ಮಧ್ಯಾಹ್ನ ಮಹದೇಶ್ವರರ ಉತ್ಸವ ಮೂರ್ತಿಯನ್ನು ರಥದ ಮೇಲೆ ಕುಳ್ಳಿರಿಸಿದ ನಂತರ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ಅದ್ದೂರಿ ರಥೋತ್ಸವ ನೆರವೇರಿತು.
ನೆರೆದಿದ್ದ ಭಕ್ತರು ಭಕ್ತಿ ಭಾವದಿಂದ ರಥವನ್ನು ಎಳೆದರು. ರಥವನ್ನು ದೇವಾಲಯದ ಸುತ್ತಲೂ ಎಳೆದ ನಂತರ ಸ್ವಸ್ಥಾನದಲ್ಲಿ ನಿಲ್ಲಿಸಲಾಯಿತು. ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು.