ನವದೆಹಲಿ: ಹಾಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಜೂನ್-ಜುಲೈ ತಿಂಗಳಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಈಗಾಗಲೆ ಆಹ್ವಾನ ಬಂದಿದ್ದರೂ, ಬಿಸಿಸಿಐ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲಾಕ್ಡೌನ್ 4ನೇ ಹಂತದಲ್ಲೂ ವಿಮಾನಯಾನ ನಿರ್ಬಂಧ ತೆರವುಗೊಳ್ಳದಿರುವ ಕಾರಣ ಬಿಸಿಸಿಐ, ಲಂಕಾ ಪ್ರವಾಸದ ಬಗ್ಗೆ ತಡವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಭಾರತ ತಂಡ ಪ್ರವಾಸದಲ್ಲಿ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಾಗಿದೆ. ಆದರೆ ಕರೊನಾ ಭೀತಿಯಿಂದಾಗಿ ಈ ಸರಣಿ ವಿಳಂಬಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮೇ 31ರವರೆಗೆ ಲಾಕ್ಡೌನ್ ಇರುವುದ ರಿಂದ ಮಾಸಾಂತ್ಯದವರೆಗೂ ಬಿಸಿಸಿಐಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದು.
‘ನಾವಿನ್ನೂ ಏನನ್ನೂ ನಿರ್ಧರಿಸಿಲ್ಲ. ಪ್ರಯಾಣ ನಿರ್ಬಂಧ ಯಾವಾಗ ತೆರವಾಗಲಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ನಾವು ಕಾದು ನೋಡಲಿದ್ದು, ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ.
ಇದನ್ನೂ ಓದಿ ಮುಂಬೈನಲ್ಲಿ ಮಾಡುತ್ತಿದ್ದದ್ದು ಕೂಲಿ ಕೆಲಸ, ಇಲ್ಲಿ ಬೇಕಂತೆ ಬಾಸುಮತಿ ಅನ್ನ!
6-8 ವಾರಗಳ ತರಬೇತಿ ಶಿಬಿರ ಬೇಕು
ವೃತ್ತಿಪರ ಕ್ರೀಡಾಪಟುಗಳು ರೇಸ್ ಕುದುರೆಗಳಿದ್ದಂತೆ. ರೇಸ್ ಕುದುರೆಗಳನ್ನು ಎಷ್ಟು ಸಮಯ ಕಟ್ಟಿಹಾಕಲು ಸಾಧ್ಯ? ಕುದುರೆಗಳಿಗೆ ಓಡುವುದು ಮಾತ್ರ ಗೊತ್ತಿರುತ್ತದೆ. ಅದೇ ರೀತಿ ಕ್ರೀಡಾಪಟುಗಳು ಸದಾ ಆಡುತ್ತಿರಲು ಬಯಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಮುನ್ನ ಕ್ರಿಕೆಟಿಗರಿಗೆ ಕನಿಷ್ಠ 6ರಿಂದ 8 ವಾರಗಳ ತರಬೇತಿ ಶಿಬಿರ ಆಯೋಜಿಸುವುದು ಅಗತ್ಯ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.