ನವದೆಹಲಿ: 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಕ್ರಿಕೆಟ್ಗೆ ವಾಪಸಾಗುವ ಹಂಬಲದಲ್ಲಿರುವ ವೇಗಿ ಎಸ್. ಶ್ರೀಶಾಂತ್ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪರ ಆಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಅವರ ನಿಷೇಧ ಶಿಕ್ಷೆ ಸೆಪ್ಟೆಂಬರ್ನಲ್ಲಿ ಅಂತ್ಯಗೊಳ್ಳಲಿದ್ದು, ಮುಂದಿನ ರಣಜಿ ಟ್ರೋಫಿಯಲ್ಲಿ ಆಡುವ ಸಿದ್ಧತೆಯಲ್ಲಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರುವ ಮೂಲಕ ಮುಂದಿನ ವರ್ಷದ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿರುವ 37 ವರ್ಷದ ಶ್ರೀಶಾಂತ್, 3 ತಂಡಗಳ ಪರ ಆಡುವ ಉತ್ಸಾಹ ಹೊಂದಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ಮಾರ್ಗದರ್ಶಕರಾಗಿರುವುದರಿಂದ ಮುಂಬೈ ಇಂಡಿಯನ್ಸ್ ಪರ ಆಡುವುದು ಅವರ ಮೊದಲ ಆಯ್ಕೆಯಾಗಿದೆ. ಈ ವರ್ಷದ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವುದರಿಂದ ಶ್ರೀಶಾಂತ್, ಸೆಪ್ಟೆಂಬರ್ ಬಳಿಕ ಟೂರ್ನಿ ಮರುನಿಗದಿಯಾದರೆ ಈ ವರ್ಷವೇ ಐಪಿಎಲ್ ಆಡುವ ಆಸೆಯನ್ನೂ ಹೊಂದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯ ಆಡಿದ 51 ಆಟಗಾರರ ವಿರುದ್ಧ ಪೊಲೀಸ್ ಕೇಸ್!
‘ಐಪಿಎಲ್ನಲ್ಲಿ ನಾನು ಯಾವುದೇ ತಂಡದ ಪರ ಆಡಲು ಸಿದ್ಧನಿದ್ದೇನೆ. ಆದರೆ ಕ್ರಿಕೆಟ್ ಅಭಿಮಾನಿಯಾಗಿ ನಾನು ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಯಾಕೆಂದರೆ ಆ ತಂಡದಲ್ಲಿ ಸಚಿನ್ ಪಾಜಿ ಇದ್ದಾರೆ. ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿರುವ ಸಲುವಾಗಿಯೇ ನಾನು ಕ್ರಿಕೆಟ್ ಆಡಲಾರಂಭಿಸಿದ್ದೆ. ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ನಾನು ಸಚಿನ್ ಪಾಜಿ ಅವರಿಂದ ಸಾಕಷ್ಟು ಕಲಿತಿರುವೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.
ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡದ ಪರ ಆಡುವ ಆಸೆಯೂ ಅವರಿಗೆ ಇದೆ. 2013ರಲ್ಲ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಳ್ಳುವಾಗ ಶ್ರೀಶಾಂತ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದರು. ಅದಕ್ಕೆ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್ ತಂಡದ ಪರ ಆಡಿದ್ದರು.