ಸೊರಬ: ಕಳೆದ ಮೂರು ತಿಂಗಳಿನಿಂದ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಮಹಿಳಾ ಸಬಲೀಕರಣದಡಿ ಶೇ.90 ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಉಳವಿ ಹೋಬಳಿಯ ಕುಪ್ಪೆ ಗ್ರಾಮದಲ್ಲಿ 18 ಕೋಟಿ ರೂ. ವೆಚ್ಚದ ಶ್ರೀ ನಾರಾಯಣಗುರು ವಸತಿ ಶಾಲಾ ಕಟ್ಟಡ ಹಾಗೂ ಗುಡವಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಿಂದಿನ ಸರ್ಕಾರ ಬಸ್ ಖರೀದಿಗೆ ಮುಂದಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಿದ್ದಲ್ಲದೆ ಬಸ್ಗಳನ್ನು ಖರೀದಿಸಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಕಾಮಗಾರಿಗಳ ಘೋಷಣೆಯ ಜತೆಗೆ ಅನುಷ್ಠಾನವೂ ಮುಖ್ಯವಾಗಿದೆ. 2022ರಲ್ಲಿ ಶ್ರೀ ಗುರುನಾರಾಯಣಗುರು ವಸತಿ ನಿಲಯ ಸೊರಬದಲ್ಲಿ ಬಾಡಿಗೆ ಕಟ್ಟಡದಲ್ಲಿ ಸ್ಥಾಪನೆಯಾಗಿತ್ತು. ಗ್ರಾಮೀಣ ಪ್ರದೇಶದಲ್ಲೂ ವಿಸ್ತಾರವಾಗಲಿ ಎಂದು ಕುಪ್ಪೆ ಗ್ರಾಮದಲ್ಲಿ ಮಾಡಲಾಗಿದೆ. ವಸತಿ ನಿಲಯದಲ್ಲಿ 250 ಮಕ್ಕಳು ಅಭ್ಯಾಸ ಮಾಡಲಿದ್ದಾರೆ. ಮುಂದಿನ ದಿನದಲ್ಲಿ ಸಿಬಿಎಸ್ಇ ವಿಷಯಗಳ ಅಧ್ಯಯನ ಮಾಡಲಿದ್ದಾರೆ ಎಂದರು.
ಇಲ್ಲಿನ ರೈತರು ದಂಡಾವತಿ ಯೋಜನೆಗೆ ಅಂದು ವಿರೋಧ ವ್ಯಕ್ತಪಡಿಸಿದಾಗ ನಾನೂ ಅವರೊಂದಿಗೆ ಕೈಜೋಡಿಸಿದ್ದೆ. ಈಗ ಯಾರ ಜಮೀನೂ ಮಳುಗಡೆಯಾಗದಂತೆ ದಂಡಾವತಿಗೆ ಪರ್ಯಾಯವಾಗಿ ವರದಾ, ದಂಡಾವತಿ ನದಿಗಳಿಗೆ ಬ್ಯಾರೇಜ್ ನಿರ್ಮಿಸಿ ನೀರಾವರಿ ಕಲ್ಪಿಸಲಾಗುವುದು ಎಂದು ತಿಳಿಸಿದರು. ತಹಸೀಲ್ದಾರ್ ಹುಸೇನ್ ಸರಕಾವಸ್, ಇಒ ಡಾ. ಪ್ರದೀಪ್ಕುಮಾರ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ, ಎಚ್.ಗಣಪತಿ, ಜಗದೀಶ್, ಲೋಕೇಶ್, ತಬಲಿ ಬಂಗಾರಪ್ಪ, ಜಗದೀಶ್, ಮಂಜುನಾಥ್, ಹೆಗ್ಗೋಡು ಗ್ರಾಪಂ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಬಿ.ರಮೇಶ್, ಜಿಲ್ಲಾ ಹಿಂದುಳಿದ ವರ್ಗದ ಅಧಿಕಾರಿ ಕೆ.ಆರ್.ಶೋಭಾ, ವೆಂಕಟೇಶ್ ಇತರರಿದ್ದರು.
ಕ್ಷೇತ್ರಕ್ಕೆ 109 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳು ಆರಂಭವಾಗಲಿವೆ. ಶರಾವತಿ ನದಿಯಿಂದ 625 ಕೋಟಿ ರೂ. ಅನುದಾನದಲ್ಲಿ ಸೊರಬ, ಆನವಟ್ಟಿ ಕುಡಿಯುವ ನೀರು ಸೇರಿ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಬಜೆಟ್ ಅನುಮೋದನೆ ದೊರೆಯಲಿದೆ.
ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ