ಗೋಣಿಕೊಪ್ಪ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳ್ನು ಹಮ್ಮಿಕೊಳ್ಳಲಾಯಿತು.
ಇಲ್ಲಿನ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಚಮ್ಮಟೀರ ಸುಗುಣ ಮುತ್ತಣ್ಣ ನೇತೃತ್ವದಲ್ಲಿ ಅರ್ಚಕರಾದ ಸುಬ್ರಮಣ್ಯ ಕೇಕುನ್ನಾಯ ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿಸಿದರು. ಭದ್ರಕಾಳಿ ದೇವಿಗೆ ಮಹಾಮಂಗಳಾರತಿ ಸೇರಿದಂತೆ ಶ್ರೀ ರಾಮನ ಸ್ತೋತ್ರವನ್ನು ಪಠಣ ಮಾಡುವ ಮೂಲಕ ವಿವಿಧ ಪೂಜಾವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಪ್ರಸಾದ ವಿನಿಯೋಗದ ಬಳಿಕ ನೆರೆದ ಭಕ್ತರಿಗೆ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಮಾಜಿ ಅಧ್ಯಕ್ಷರಾದ ಚಮ್ಮಟೀರ ಡಿಕ್ಕಿ ಕುಶಾಲಪ್ಪ, ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.