ಕಿಕ್ಕೇರಿ: ಸಮೀಪದ ಮಗನಹೊಸಹಳ್ಳಿ ಗ್ರಾಮದ ಶನೈಶ್ಚರ ದೇಗುಲದಲ್ಲಿ ಎರಡು ದಿನಗಳ ಕಾಲ ವಿಶೇಷ ಪೂಜೆ, ಹೋಮ ನೆರವೇರಿತು.
ಅರ್ಚಕ ಶ್ರೀನಿವಾಸ್, ಗೋವಿಂದ ಮಾರ್ಗದರ್ಶನದಲ್ಲಿ ನಡೆದ 18ನೇ ವರ್ಷದ ಪೂಜಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾಪೂಜೆ, ಕಳಸಪೂಜೆ ನಡೆದವು. ಗಣಪತಿ ಪೂಜೆ, ಶನೈಶ್ಚರ ಹೋಮ, ನವಗ್ರಹ ಪೂಜೆ ಮತ್ತಿತರ ಪೂಜಾ ವಿಧಿವಿಧಾನಗಳು ನೆರವೇರಿತು.
ಶನೈಶ್ಚರನನ್ನು ವಿವಿಧ ಪರಿಮಳ ಪುಷ್ಪಗಳಿಂದ ಅಲಂಕಾರ ಮಾಡಿ, ವಸ್ತ್ರಾಭರಣ ತೊಡಿಸಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.