ಬೆಂಗಳೂರು: ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಷರತ್ತುಬದ್ಧ ಸರಳ ದಸರಾ ಹಾಗೂ ದೀಪಾವಳಿ ಹಬ್ಬಗಳಿಗೆ ಸರ್ಕಾರ ಸಮ್ಮತಿಸಿ, ವಿಶೇಷ ಮಾರ್ಗಸೂಚಿಯನ್ನು ಪ್ರಕಟಿಸಿದೆ. ನಾಡಹಬ್ಬ ದಸರಾ ಮಹೋತ್ಸವದ ವಿಜೃಂಭಣೆಗೆ ಈ ಬಾರಿ ಕರೊನಾ ಅಡ್ಡಗಾಲು ಹಾಕಿದೆ. ಆದರೂ ಪರಂಪರೆ ಮತ್ತು ಸಂಪ್ರದಾಯದ ಪಾಲನೆಗೆ ಅವಕಾಶ ಕೊಡಲೆಂದು ಸರಳ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್ ಮೈಸೂರು ಹಾಗೂ ರಾಜ್ಯದ ಉಳಿದ ಭಾಗಕ್ಕೆ ಪ್ರತ್ಯೇಕವಾಗಿ ವಿಶೇಷ ಮಾರ್ಗಸೂಚಿ ಹೊರಡಿಸಿದ್ದಾರೆ. ಮೈಸೂರಿನ ಆಯ್ದ ಸ್ಥಳಗಳಿಗೆ 9 ದಿನಗಳ ಕಾಲ ಪ್ರತಿದಿನ ಸಂಜೆ 2 ತಾಸಿನಮಟ್ಟಿಗೆ ವಿದ್ಯುತ್ ದೀಪಗಳ ಅಲಂಕಾರಕ್ಕೆ ಅವಕಾಶ ನೀಡಿದ್ದು, ಸರಳ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದೆ.