ಬೆಳಗಾವಿ: ಸೋಯಾಬೀನ್ ತುಂಬಿದ ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಓರ್ವನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, 2 ಸೋಯಾಬೀನ್ ಚೀಲ ಹಾಗೂ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ. ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ರಾಜಗೋಳಿ ಗ್ರಾಮದ ಕಲ್ಲಪ್ಪ ಶಂಕರ ಶಿಂಧೆ (30) ಬಂಧಿತ ಆರೋಪಿ. ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದ ಚಂದ್ರು ದೇಸಾಯಿ ಎಂಬುವರ ಜಮೀನಿನಲ್ಲಿ ತುಂಬಿ ಇಟ್ಟಿದ್ದ 65 ಕೆಜಿ ತೂಕದ ಎರಡು ಸೋಯಾಬೀನ್ ಚೀಲಗಳನ್ನು ಕಳ್ಳತನ ಮಾಡಿಕೊಂಡು ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕಾಕತಿ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.