ದಾವಣಗೆರೆ: ಸಮಾಜಮುಖಿಯಾಗಿ ಸ್ಪಂದಿಸಿದವರು ಸದಾ ಸ್ಮರಣೀಯರಾಗಿರುತ್ತಾರೆ. ಜನಮಾನಸದಲ್ಲಿ ಉಳಿಯುತ್ತಾರೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಹರಳೆಣ್ಣೆ ಕೊಟ್ಟೂರು ಬಸವಪ್ಪ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರೂ ಜೀವನದಲ್ಲಿ ಸಂಪಾದನೆಯ ಸ್ವಲ್ಪ ಅಂಶವನ್ನಾದರೂ ಸಮಾಜಕ್ಕಾಗಿ ಸಮರ್ಪಿಸಬೇಕು. ಸಮಾಜದ ಋಣ ತೀರಿಸಬೇಕು ಎಂದರು.
ವಾಗ್ಮಿ ಎಚ್.ಬಿ.ಮಂಜುನಾಥ್ ಮಾತನಾಡಿ, ಹರಳೆಣ್ಣೆ ಕೊಟ್ಟೂರು ಬಸವಪ್ಪ ಮೊದಲಾದವರು ಸವಾಲುಗಳನ್ನು ಎದುರಿಸಿ ತಾವು ನೆಲೆ ನಿಲ್ಲುವ ಜತೆಗೆ ಸಮಾಜದಲ್ಲಿ ಇತರರಿಗೂ ದಾರಿ ಕಲ್ಪಿಸಿದರು. ಪುರಸ್ಕಾರ, ದಾನ ಪಡೆದವರು ತಾವು ಉತ್ತಮ ಸ್ಥಿತಿಗೆ ಬಂದಾಗ ದಾನದ ಮೂಲಕ ಸಮಾಜಕ್ಕೆ ಕಾಣಿಕೆ ನೀಡಬೇಕು. ಪಿತೃ, ಮಾತೃ ಹಾಗೂ ಗುರುವಿನ ಋಣ ತೀರಿಸಬೇಕು ಎಂದು ತಿಳಿಸಿದರು.
ಹಿಂದಿನ ತಲೆಮಾರಿನವರು ಸಾಧನ ಸವಲತ್ತುಗಳಿಲ್ಲದ ಕಾಲದಲ್ಲಿ ಸಮಾಜವನ್ನು ಕಟ್ಟಿದರು. ಅದು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿಗಳು ಉದ್ಯೋಗಿಗಳಾಗುವ ಜತೆಗೆ ಉದ್ಯೋಗದಾತರಾಗಬೇಕು ಎಂದರು.
ನೀಲಾಂಬಿಕಾ ಜಂಬಿಗಿ ಶರಣಪ್ಪ, ಟ್ರಸ್ಟಿನ ಸದಸ್ಯರಾದ ಎಚ್.ಕೆ.ಮಂಜುನಾಥ್, ನಾಗರತ್ನಾ ಮಂಜುನಾಥ್, ಸುಮಂತ್, ಮಂಜುಳಾ ಚಂದ್ರಶೇಖರ್, ಜಂಬಿಗಿ ಗಿರೀಶ್, ಎಚ್.ಸಿ.ಸೂರಜ್ ಇದ್ದರು.
ಕನ್ನಡ ಉಪನ್ಯಾಸಕ ಜಂಬಿಗಿ ಮೃತ್ಯುಂಜಯ ಪ್ರಾಸ್ತಾವಿಕ ಮಾತನಾಡಿದರು. ಚಿತ್ರಕಿ ಶಿವಕುಮಾರ್ ಪ್ರಾರ್ಥನಾ ವಚನ ಹಾಡಿದರು. ದಿವ್ಯಾ ಹಾಗೂ ವಿಭಾ ನಿರೂಪಿಸಿದರು.