ಬಿಹಾರ: ಇಲ್ಲಿನ ಜುರ್ಖಾ ದಿಹ್ ಗ್ರಾಮದಲ್ಲಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಆರು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಬುಧವಾರ ಸಂಜೆ 4 ಗಂಟೆಗೆ ಟೆಂಪೋದಲ್ಲಿ ಬಂದು ಅಪಹರಿಸಿದ್ದಾರೆ. ಆದರೆ ಬಾಲಕ ಕೂಗಿಕೊಂಡಾಗ ದುಷ್ಕರ್ಮಿಗಳು ಚಲಿಸುತ್ತಿದ್ದ ವಾಹನದಿಂದ ರಸ್ತೆಯಲ್ಲಿ ಎಸೆದಿದ್ದಾರೆ.
ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಗಾಯಗೊಂಡ ಬಾಲಕನನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನಂತರ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಗ್ರಾಮಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಗೊಂಡ ಬಾಲಕನನ್ನು ಜುರ್ಖಾ ದಿಹ್ ನಿವಾಸಿ ಮನೋಜ್ ಕುಮಾರ್ ಅವರ ಆರು ವರ್ಷದ ಮಗ ಉತ್ಕರ್ಷ್ ಕುಮಾರ್ ಎಂದು ಗುರುತಿಸಲಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದು ಎಂದು ಗಾಯಾಳು ಬಾಲಕನ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಗಾಯಗೊಂಡ ಉತ್ಕರ್ಷ್ ಕುಮಾರ್ ಜುರ್ಖಾ ದಿಹ್ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಪ್ರತಿದಿನದಂತೆ ಬುಧವಾರವೂ ಶಾಲೆಯಿಂದ ನಾಲ್ಕು ಗಂಟೆ ಸುಮಾರಿಗೆ ಕಾಲ್ನಡಿಗೆಯಲ್ಲಿ ಮನೆಗೆ ಮರಳುತ್ತಿದ್ದಾಗ ಮಾರ್ಗಮಧ್ಯೆ ಟೆಂಪೋದಲ್ಲಿದ್ದ ದುಷ್ಕರ್ಮಿಗಳು ಅವನನ್ನು ಬಲವಂತವಾಗಿ ಅಪಹರಿಸಿದ್ದಾರೆ.
ಬಾಲಕ ಕೂಗಿಕೊಂಡಾಗ ಚಲಿಸುತ್ತಿದ್ದ ಟೆಂಪೋದಿಂದ ಕೆಳಗೆ ಎಸೆಯಲಾಯಿತು. ಇದರಿಂದಾಗಿ ಅವನು ತೀವ್ರವಾಗಿ ಗಾಯಗೊಂಡನು. ಗಾಯಗೊಂಡ ಬಾಲಕನ ತಂದೆ ಮಾತನಾಡಿ, 2008ರಿಂದ ಗ್ರಾಮದ ಕೆಲವರೊಂದಿಗೆ ಜಮೀನು ವಿವಾದವಿದೆ. ಕೊಲೆ ಮಾಡುವ ಉದ್ದೇಶದಿಂದ ಅಪಹರಣಕ್ಕೆ ಯತ್ನಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ದರ್ಭಾಂಗ ಆಸ್ಪತ್ರೆಗೆ ದಾಖಲು
ಗಾಯಗೊಂಡ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ದರ್ಭಾಂಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟ್ರಾಫಿಕ್ ಕಿರಿ ಕಿರಿ; ಕಚೇರಿಗೆ ಹೋಗುವವರು ಸ್ವಂತ ಕಾರು ಬಳಸಬಾರದು ಎಂದ ಸೈಬರಾಬಾದ್ ಪೊಲೀಸರು