ಸಿರಿಗೆರೆ: ಸಮೀಪದ ಚಿಕ್ಕೇನಹಳ್ಳಿಯಲ್ಲಿ ಒಕ್ಕಣೆ ಮಾಡಲು ಸಿದ್ಧಪಡಿಸಿದ್ದ ತೆನೆ ರಾಶಿಗೆ ಶುಕ್ರವಾರ ಆಕಸ್ಮಿಕ ಬೆಂಕಿ ತಗುಲಿ ಅಂದಾಜು 25 ಲೋಡ್ ಮೆಕ್ಕೆಜೋಳ ನಾಶಗೊಂಡಿದೆ.
ಗ್ರಾಮದ ಸುರೇಶ್ ಮತ್ತು ರುದ್ರೇಶ್ ಇವರು ಬೆಳೆದಿದ್ದ ಮೆಕ್ಕೆಜೋಳದ ತೆನೆಗಳನ್ನು ಒಕ್ಕಣೆ ಮಾಡಲು ಕಣಕ್ಕೆ ತಂದು ಸಂಗ್ರಹಿಸಿದ್ದರು. ಇದಕ್ಕೆ ಯಾರೋ ಕಿಡಿಗೇಡಿಗಳು ಧೂಮಪಾನ ಮಾಡಿ ಬಿಸಾಡಿದ ಬೀಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಬೆಂಕಿ ತಗುಲಿದ ಕೆಲ ನಿಮಿಷದಲ್ಲೇ ಇಡೀ ರಾಶಿ ವ್ಯಾಪಿಸಿದ್ದು, ಅಂದಾಜು 200 ಕ್ವಿಂಟಾಲ್ಗೂ ಅಧಿಕ ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಗ್ರಾಮಸ್ಥರೇ ಟ್ಯಾಂಕರ್ ನೀರಿನಿಂದ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.