ಸಿಂಧನೂರು : ನಮ್ಮದು ಉದಾಹರಣೆ ಕೊಡುವ ಬದುಕಾಗಬೇಕು. ಅಂದಾಗ ಮಾತ್ರ ಜೀವನ ಸಾರ್ಥಗೊಳ್ಳುತ್ತದೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸತ್ಯಗಾರ್ಡನ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ನಿಯಮಿತದ ನೂತನ ಕಟ್ಟದ ಸಂಕೀರ್ಣದ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜೀವನ ಮೌಲ್ಯಗಳ ಕುರಿತು ವಿಶೇಷ ಪ್ರವಚನ ನೀಡಿದರು.
ಜೀವನದಲ್ಲಿ ಎರಡು ಸಾಧ್ಯತೆಗಳಿವೆ. ಒಂದು ಉದಾಹರಣೆಯಾಗಿ ಬದುಕಬೇಕು. ಇನ್ನೊಂದು ಎಚ್ಚರಿಕೆಯಾಗಿ ಬದುಕಬೇಕು. ಮಹಾತ್ಮ ಗಾಂಧೀಜಿ, ವಿಶ್ವೇಶ್ವರಯ್ಯ ಉದಾಹರಣೆಯಾಗಿ ಬದುಕಿದರೆ, ಕಾಡುಗಳ್ಳ ವೀರಪ್ಪನ್, ಹಿಟ್ಲರ್ ಎಚ್ಚರಿಕೆಯಾಗಿ ಬದುಕಿದರು. ಬದುಕು ಅನೇಕ ಅವಕಾಶಗಳನ್ನು ಕೊಟ್ಟಿದ್ದು, ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೆ ಸಾಕು ಬದುಕಿನ ನಿಜ ತಿಳಿಯಲಿದೆ ಎಂದರು.
ನಾವು ಕಲಿಯುಗದಲ್ಲಿದ್ದೇವೆ. ಕೆಟ್ಟ ಕಾಲ ಎಂದರ್ಥವಲ್ಲ. ಕಲಿಯುವವರ ಕಾಲ. ಹೊಸ ಆವಿಸ್ಕಾರ, ಸಂಶೋಧನೆಗಳು ನಡೆದು ಜಗತ್ತನ್ನು ಅಂಗೈಯಲ್ಲಿ ನೋಡುವ ಕಾಲ ಸೃಷ್ಟಿಯಾಗಿದೆ. ಅದಕ್ಕೆ ಇದನ್ನು ಕಲಿಯುವವರ ಕಾಲವೆಂದು ವ್ಯಾಖ್ಯಾನಿಸಬೇಕು. ಬದುಕಿನ ಸಾರ್ಥಕತೆ ಹೇಗೆ ಇರಬೇಕೆಂಬುದನ್ನು ನಾವೇ ನಿರ್ಧರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ, ಸಹಕಾರಿ ಅಧ್ಯಕ್ಷ ಹಂಪನಗೌಡ ಬಾದರ್ಲಿ ಮಾತನಾಡಿದರು. ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಅಮರೇಗೌಡ ವಕೀಲ, ಬಿ.ಎನ್.ಪಾಟೀಲ್, ಸಹಕಾರಿ ನಿರ್ದೇಶಕರಾದ ಸಿದ್ರಾಮಪ್ಪ ಮಾಡಸಿರವಾರ, ಸಿಂಹಾದ್ರಿ ಸತ್ಯನಾರಾಯಣ, ಜಯಂತಿಲಾಲ್ ಜೈನ್ ಇತರರಿದ್ದರು.