ನೆಹರು ಜಯಂತಿ ನಿಮಿತ್ತ ಮಕ್ಕಳ ದಿನಾಚರಣೆ | ಬಡ ತಾಯಂದಿರಿಗೆ ಸೀರೆ ವಿತರಣೆ
ಸಿಂಧನೂರು: ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದರ ಜತೆ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ಪಾಟೀಲ್ ಹೇಳಿದರು.
ನಗರದ ಎಪಿಎಂಸಿಯಲ್ಲಿ ಭಾನುವಾರ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಮಾಜಿ ಪ್ರಧಾನಿ ಪಂ. ಜವಾಹರಲಾಲ್ ನೆಹರು ಜಯಂತಿ ಅಂಗವಾಗಿ ಮಕ್ಕಳ ದಿನ ಆಚರಣೆಯಲ್ಲಿ ನಾಡು-ನುಡಿ ರಕ್ಷಣೆಯ ಸೇವೆ ಸಲ್ಲಿಸುವರಿಗೆ, ಕನ್ನಡ ಸಾಹಿತ್ಯ ಬರಹಗಾರರಿಗೆ, ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಬಡ ತಾಯಂದಿರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ ಎಲ್ಲ ಮಕ್ಕಳ ಮೂಲಭೂತ ಹಕ್ಕು ಮತ್ತು ಅಗತ್ಯಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿ ನೀಡಿದೆ. ಇವುಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಮಕ್ಕಳಿಗೆ ಅನ್ವಯಿಸುವ ಕಾರ್ಮಿಕ ಕಾನೂನು ಕಾಯ್ದೆ, ಬಾಲ ಕಾರ್ಮಿಕರ ನಿಯಂತ್ರಣ ಹಾಗೂ ನಿಷೇಧ ಕಾಯ್ದೆ ಸೇರಿ ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕಿದೆ. ನಾಡು-ನುಡಿ ರಕ್ಷಣೆಯ ಹೊಣೆಗಾರಿಕೆ ನಮ್ಮದಾಗಬೇಕು ಎಂದು ತಿಳಿಸಿದರು.
ನಿವೃತ್ತ ಕನ್ನಡ ಶಿಕ್ಷಕ ವೆಂಕನಗೌಡ ವಟಗಲ್ ಮಾತನಾಡಿ, ಕನ್ನಡ ಭಾಷೆಯ ಅಭಿಮಾನ ಹೊಂದುವ ಜತೆಗೆ ಅದನ್ನು ಬೆಳೆಸಬೇಕು ಎಂದರು. ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ಸಂತೋಷ ಅಂಗಡಿ, ನಿವೃತ್ತ ಪಿಎಸ್ಐ ಹುಲ್ಲಪ್ಪ ರಾಥೋಡ್ ಮಾತನಾಡಿದರು.
ಕಾರುಣ್ಯಾಶ್ರಮದ ಆಡಳಿತಾಧಿಕಾರಿ ಚನ್ನಬಸವ ಹಿರೇಮಠ, ನಗರಸಭೆ ಸದಸ್ಯ ಡಿ.ಸತ್ಯನಾರಾಯಣ, ವೆಂಕೋಬಣ್ಣ ಕಲ್ಲೂರು, ಗ್ರಾಪಂ ಸದಸ್ಯ ಪಂಪಾಪತಿ ಪೊಲೀಸ್ ಪಾಟೀಲ್, ರಂಗಭೂಮಿ ಕಲಾವಿದ ಮಲ್ಲಯ್ಯಸ್ವಾಮಿ ಕಣ್ಣೂರು, ವೀರೇಶ ಯಡಿಯೂರಮಠ, ಸಂಗಮೇಶ ಹಿರೇಮಠ, ಪಂಪಯ್ಯಸ್ವಾಮಿ ಸಾಲಿಮಠ, ಪ್ರಶಾಂತ ರಾಠೋಡ್, ಸಿದ್ದರಾಮಯ್ಯ ಹೊಸಳ್ಳಿ, ಮಲ್ಲಯ್ಯ ಹಿರೇಮಠ ನವಲಿ, ಬಷೀರ್ ಎತ್ಮಾರಿ , ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲಾ, ವೆಂಕನಗೌಡ ಮುಳ್ಳೂರು ಇದ್ದರು.