ಸಿಂದಗಿ: ತಾಲೂಕಿನ ಕುಮಸಗಿ ಕ್ರಾಸ್ ಬಳಿ ಗೂಬೆ (ಗೂಗಿ)ಯನ್ನು ಅಕ್ರಮವಾಗಿ ಹಿಡಿದಿಟ್ಟು ಮಹಾರಾಷ್ಟ್ರಕ್ಕೆ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ವಿಭಾಗದ ಬೆಳಗಾವಿ ಪಿಎಸ್ಐ ರೋಹಿಣಿ ಪಾಟೀಲ ಹಾಗೂ ಸಿಬ್ಬಂದಿ ಭಾನುವಾರ ಬಂಧಿಸಿದ್ದಾರೆ. ಅ.3 ರಂದು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಮಸಗಿ ಕ್ರಾಸ್ ಬಳಿ ಅರಣ್ಯ ಪ್ರದೇಶದಿಂದ ಮೂವರು ಗೂಬೆಯನ್ನು ಪಂಜರದಲ್ಲಿ ಕೂಡಿ ಹಾಕಿ ನೆರೆಯ ಮಹಾರಾಷ್ಟ್ರಕ್ಕೆ ಮಾರಾಟ ಮಾಡಲು ಹೊರಟಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಸಣ್ಣ ರಾಮಚಂದ್ರ ಪವಾರ (60), ವಿಠ್ಠಲ ಬಸಣ್ಣ ಪವಾರ (32) ಬಂಧಿತರು. ಶಿವು ಪವಾರ ಎಂಬಾತ ಪರಾರಿಯಾಗಿದ್ದಾನೆ. 1.5 ಕೆಜಿ ಭಾರದ ಗೂಬೆ, ಎರಡು ಬೈಕ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ರೋಹಿಣಿ ಪಾಟೀಲ ತಿಳಿಸಿದ್ದಾರೆ.