ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿದೆ. ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮತ್ತು 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದಗ್ರಹಣ ಕಾರ್ಯಕ್ರಮ ನೇರಪ್ರಸಾರವನ್ನು ಈ ಕೆಳಗಿನ ದಿಗ್ವಿಜಯ ನ್ಯೂಸ್ ಯೂಟ್ಯೂಬ್ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಗಣ್ಯರ ದಂಡು
ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಸಿಎಂ ಸ್ಟಾಲಿನ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನಟ ಕಮಲ್ ಹಾಸನ್, ನಟ ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಾಜೇಂದ್ರ ಸಿಂಗ್ ಬಾಬು, ದುನಿಯಾ ವಿಜಯ್, ನಟಿ ರಮ್ಯಾ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.
28 ಸಚಿವರ ಆಯ್ಕೆ ಭಾರೀ ಕಸರತ್ತು ನಡೆಸಲಾಯಿತು. ಆದರೆ, ಅಂತಿಮವಾಗಿ ಮೊದಲ ಸಚಿವ ಸಂಪುಟಕ್ಕೆ ಕೇವಲ ಎಂಟು ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಒಟ್ಟು ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಐದು ಸಮುದಾಯಕ್ಕೆ ತಲಾ ಒಂದೊಂದು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ. ದಲಿತ ಸಮುದಾಯಕ್ಕೆ ಮೂರು ಸ್ಥಾನ, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು ಹಾಗೂ ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡಲಾಗಿದೆ.
ಎಂಟು ಸಚಿವರು ಯಾರು?
* ಎಂ. ಬಿ. ಪಾಟೀಲ್ (ಲಿಂಗಾಯತ)
* ಡಾ. ಜಿ. ಪರಮೇಶ್ವರ್ (ದಲಿತ ಬಲ)
* ಪ್ರಿಯಾಂಕ ಖರ್ಗೆ (ದಲಿತ ಬಲ)
* ಕೆ.ಎಚ್. ಮುನಿಯಪ್ಪ (ದಲಿತ ಎಡ)
* ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)
* ಸತೀಶ್ ಜಾರಕಿಹೊಳಿ (ಪರಿಶಿಷ್ಠ ಪಂಗಡ) (ವಾಲ್ಮಿಕಿ)
* ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
* ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
ನಿನ್ನೆ ಮಧ್ಯಾಹ್ನದಿಂದ ಸಚಿವರ ಆಯ್ಕೆಗೆ ಭಾರೀ ಕಸರತ್ತು ನಡೆಯಿತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ನಿವಾಸದಲ್ಲಿ ತಡರಾತ್ರಿ ಎರಡು ಗಂಟೆಯವರೆಗೆ ಹೈವೋಲ್ಟೇಜ್ ಸಭೆ ನಡೆಯಿತು. ಜಾತಿವಾರು, ಹಿರಿತನದ ಆಧಾರ ಮೇಲೆ ಸಚಿವರನ್ನು ಆಯ್ಕೆ ಮಾಡಲಾಗಿದೆ. ಒಂದೇ ಬಾರಿಗೆ 28 ಸಚಿವರ ಆಯ್ಕೆಗೆ ಪ್ರಯತ್ನ ನಡೆಯಿತಾದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಒಮ್ಮತ ಮೂಡಲಿಲ್ಲ. ಇದರಿಂದ ಸಭೆ ಮೇಲೆ ಸಭೆ ನಡೆಸಬೇಕಾಯಿತು. ಆದರೂ ಸಹಮತ ಮೂಡದ ಹಿನ್ನೆಲೆಯಲ್ಲಿ ಕೈ ಹೈಕಮಾಂಡ್ ಹೈರಾಣಾಯಿತು.
ಅಂತಿಮವಾಗಿ ಎಂಟು ಸಚಿವರಿಗೆ ಮಾತ್ರ ಉಭಯ ನಾಯಕರು ಒಪ್ಪಿಗೆ ನೀಡಿದರು. ಇಂದು ಕೇವಲ ಎಂಟು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಸಚಿವ ಸಂಪುಟ ವಿಚಾರವಾಗಿ ಆರಂಭದಲ್ಲೆ ಸಿದ್ದು- ಡಿಕೆಶಿ ನಡುವೆ ಜಟಾಪಟಿ ಉಂಟಾಗಿದೆ. ಎರಡು ಪವರ್ ಸೆಂಟರ್ ನಡುವೆ ಶೀತಲ ಸಮರ ಏರ್ಪಟ್ಟಿದ್ದು, ಮುಂದೆ ಇದು ಸರ್ಕಾರ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. (ದಿಗ್ವಿಜಯ ನ್ಯೂಸ್)
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಹುಲ್, ಪ್ರಿಯಾಂಕಾ ಗಾಂಧಿ; ಡಿಕೆಶಿ ಸ್ವಾಗತ…
ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಸಿದ್ಧತೆ: ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಿದ್ದರಾಮಯ್ಯ ಸಭೆ