ಕಡೂರು: ತಾಲೂಕು ಬಂಜಾರ ಸಮಾಜದಿಂದ ಮಾ.11ಕ್ಕೆ ಅದ್ದೂರಿಯಾಗಿ ಶ್ರೀಸಂತ ಸೇವಾಲಾಲ್ ಜಯಂತಿ ಆಚರಿಸಲಾಗುವುದು ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಕುಮಾರ್ ನಾಯ್ಕ ತಿಳಿಸಿದರು.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲು ಶಾಸಕ ಕೆ.ಎಸ್.ಆನಂದ್ ಪ್ರಯತ್ನ ನಡೆಸುತ್ತಿದ್ದು, ಬಹುತೇಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಬಿ.ಎಚ್.ರಸ್ತೆಯ ವೆಂಕಟೇಶ್ವರ ದೇವಾಲಯದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಎಂದರು.
ಸಮಾಜದ ಗುರುಗಳಾದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು. ಶಾಸಕ ಕೆ.ಎಸ್.ಆನಂದ್ ಸಮಾರಂಭ ಉದ್ಘಾಟಿಸಲಿದ್ದಾರೆ. ಹೆಸರಾಂತ ಗಾಯಕಿ ಮಂಗ್ಲಿಬಾಯಿ, ಸರಿಗಮಪ ಗಾಯಕ ರಮೇಶ್ ಲಮಾಣಿ, ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ.ಲಲಿತಾನಾಯ್ಕ ಆಗಮಿಸಲಿದ್ದಾರೆ. ತಾಲೂಕಿನ ಎಲ್ಲ ತಾಂಡಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಲಿದ್ದಾರೆ. ಬಂಜಾರ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಸಮಾಜದ ಜಯಂತಿ ಕಾರ್ಯಕ್ರಮಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದರು.
ಸಮಾಜದ ಮುಖಂಡರಾದ ಸತೀಶ್ನಾಯ್ಕ, ಪ್ರಕಾಶ್ನಾಯ್ಕ, ಶ್ರೀನಿವಾಸ್ನಾಯ್ಕ, ಪಾಂಡಣ್ಣ, ರಾಮಚಂದ್ರನಾಯ್ಕ, ನಾರಾಯಣ್ನಾಯ್ಕ, ಬಾಲಾಜಿ ನಾಯ್ಕ, ಗೋವಿಂದನಾಯ್ಕ, ಕೃಷ್ಣನಾಯ್ಕ ಮತ್ತಿತರಿದ್ದರು