ಆನಂದಪುರ: ಇಲ್ಲಿನ ಗ್ರಾಮ ದೇವರಾದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು. ಬೆಳಗ್ಗೆ ದೇವಾಲಯದ ಆವರಣದಲ್ಲಿ ಅಧಿಕಾರ ಆಧಿವಾಸ ಹೋಮ, ಉತ್ಸವ ಮೂರ್ತಿಯ ಪ್ರಾಣಪ್ರತಿಷ್ಠಾಪನೆ, ಸರ್ವಾಲಂಕಾರ ಪೂಜೆ, ಮಹಾರಥ ಪೂಜೆ ನಡೆದವು. ಅಭಿಜತ್ ಮುಹೂರ್ತದಲ್ಲಿ ದೇವರ ರಥಾರೋಹಣ, ಹಣ್ಣು ಕಾಯಿ ಸಮರ್ಪಣೆ ನಡೆಯಿತು. ನಂತರ ರಥದ ರಾಜಬೀದಿ ಉತ್ಸವ ನಡೆಯಿತು. ಚಂಡೆ, ಕೋಲಾಟ, ಭಜನೆ ಸಹಿತ ವಿವಿಧ ಕಲಾ ತಂಡದವರು ಪಾಲ್ಗೊಂಡಿದ್ದರು. ಮುಜರಾಯಿ ಇಲಾಖೆ ತಾಲೂಕು ಮುಖ್ಯಸ್ಥ, ತಹಸೀಲ್ದಾರ ಚಂದ್ರಶೇಖರ್ ನಾಯಕ್ ಪಾಲ್ಗೊಂಡಿದ್ದರು. ಸುತ್ತಮುತ್ತಲ 20ಕ್ಕೂ ಅಧಿಕ ಗ್ರಾಮಗಳ 5 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.