ಕೊಪ್ಪಳ: ತಾಲೂಕಿನ ಶಿವಪುರದಲ್ಲಿ ಸರ್ವೇ ನಂ.297ರಲ್ಲಿ ಸರ್ಕಾರಿ ಸರ್ವೇದಾರರು ನಡೆಸಿರುವ ಸಮೀಕ್ಷೆ ಏಕಪಕ್ಷೀಯವಾಗಿದ್ದು, ಅಮಾನ್ಯ ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಅಮರೇಶ ಬಿರಾದಾರ್ಗೆ ಮನವಿ ಸಲ್ಲಿಸಿದರು.
ಗ್ರಾಮದ ಹುಲಿಗೆಮ್ಮ ತಂದೆ ಬಸಪ್ಪ ಎಂಬುವರಿಗೆ ಸೇರಿದ ಜಮೀನು ವಹಿವಾಟಿನ ಎಲ್ಲ ಹಿಡುವಳಿದಾರರ ಭೂಮಿ ವ್ಯವಹಾರ ಕುರಿತು ತನಿಖೆ ನಡೆಸಲು ತಹಸೀಲ್ದಾರ್ ಮೂಲಕ ಒತ್ತಾಯಿಸಲಾಗಿತ್ತು. ಎರಡು ತಿಂಗಳ ಬಳಿಕ ಸರ್ವೇ ನಡೆಸಲಾಗಿದೆ. ಸಮೀಕ್ಷೆ ಸಮಯದಲ್ಲಿ ಅಧಿಕಾರಿಗಳು ಏಕ ಪಕ್ಷೀಯವಾಗಿ ಸರ್ವೇ ನಡೆಸಿದ್ದಾರೆ. ಅಧಿಕಾರಿಗಳಾದ ಫರ್ವೆಜ್ ಮಹ್ಮದ್ ಮತ್ತು ಶಿವಕುಮಾರ್ಗೆ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಅದನ್ನು ಪರಿಗಣಿಸದೆ ಏಕ ಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಹಿಡುವಳಿದಾರರಾದ ಹುಲಿಗೆವ್ವ , ಸ್ವಾರೆಪ್ಪ, ಗೋಣೆವ್ವ ಕುಟುಂಬದವರು ದಾಖಲೆ ತೋರಿಸಿದರೂ ಪರಿಗಣಿಸಲು ನಿರಾಕರಿಸಿದ್ದಾರೆಂದು ಆರೋಪಿಸಿದರು.
ಇದರಿಂದ ದಲಿತ ಕುಟುಂಬಗಳಿಗೆ ಅನ್ಯಾಯವಾಗಿದೆ. ಅಂದು ನಡೆದ ಸರ್ವೇ ದಾಖಲೆಗಳನ್ನು ಪರಿಗಣಿಸದೆ ಅಮಾನ್ಯಗೊಳಿಸಬೇಕು. ಮತ್ತೊಮ್ಮೆ ಪಾರದರ್ಶಕವಾಗಿ ಸರ್ವೇ ನಡೆಸಬೇಕು. ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದರು. ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ಟಿಯುಸಿಐ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋನಾಳ, ದಲಿತ ಮುಖಂಡರಾದ ಅನಂದ ಭಂಡಾರಿ, ರಾಜಸಾಬ್ ಬಾಳೆಕಾಯಿ, ಬಸವರಾಜ ನರೇಗಲ್, ರಘು ಚಾಕ್ರಿ ಇತರರಿದ್ದರು.