ಶಿವಮೊಗ್ಗ: ರೈತರಿಗೆ ಪೂರಕವಾಗಿ ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಹಾಪ್ಕಾಮ್ಸ್ ಮಳಿಗೆಗಳನ್ನು 100ಕ್ಕೆ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ಹಾಪ್ಕಾಮ್ಸ್(ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ನಿಯಮಿತ) ಅಧ್ಯಕ್ಷ ಎನ್.ಎಂ.ಸೋಮಶೇಖರಪ್ಪ ತಿಳಿಸಿದರು.
ಸರ್ಕಾರದಿಂದ 1.8 ಕೋಟಿ ರೂ. ಅನುದಾನ ಪಡೆದು ಪ್ರತಿನಿತ್ಯ ರೈತರಿಂದ ನೇರವಾಗಿ ಹಣ್ಣು ತರಕಾರಿ ಖರೀದಿಸಲಾಗುತ್ತಿದೆ. ಶಿವಮೊಗ್ಗ ನಗರ, ತೀರ್ಥಹಳ್ಳಿ, ಸಾಗರ ಮತ್ತು ಬಿಆರ್ಪಿಯಲ್ಲಿ ಪ್ರಸ್ತುತ 22 ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು 12 ಸರ್ಕಾರಿ ಸಂಸ್ಥೆಗಳಿಗೆ ಹಣ್ಣು-ತರಕಾರಿ ಪೂರೈಕೆ ಮಾಡಿ ವಾರ್ಷಿಕವಾಗಿ 2ರಿಂದ 3 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಸಂಸ್ಥೆ ಲಾಭದಾಯಕವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳೆಗಾರರಿಂದ ಬಳಕೆದಾರರಿಗೆ ಕಾರ್ಯಕ್ರಮದಡಿ 3 ಸಾವಿರ ಸದಸ್ಯರನ್ನು ಒಳಗೊಂಡು 20 ಲಕ್ಷ ರೂ. ಷೇರು ಬಂಡವಾಳ ಮತ್ತು 10 ಲಕ್ಷ ರೂ. ಸರ್ಕಾರದ ಆವರ್ತನ ಬಂಡವಾಳವನ್ನು ಹೊಂದಿದ್ದೇವೆ. ರಾಜ್ಯದಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿದ್ದೇವೆ. ಜಿಲ್ಲೆಯ ರೈತರಿಗೆ ಮತ್ತಷ್ಟು ಮಾರುಕಟ್ಟೆ ದೊರಕಿಸಿ ಕೊಡುವ ಸಲುವಾಗಿ ಆಡಳಿತ ಮಂಡಳಿ ಚಿಂತನೆ ನಡೆಸಿದ್ದು ಇನ್ನೆರಡು ವರ್ಷಗಳಲ್ಲಿ ಸಂಪೂರ್ಣವಾಗಿ ನೆಲೆಯೂರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಕೆ.ಜೆ.ನಾಗೇಶ್ ನಾಯ್ಕ್, ಉಂಬ್ಳೇಬೈಲ್ ಮೋಹನ್, ಡಿ.ಜಿ.ಕುಮಾರಸ್ವಾಮಿ, ಡಿ.ಸಿ.ನಿರಂಜನಕುಮಾರ್, ವ್ಯವಸ್ಥಾಪಕ ಉಮೇಶ್ ಇದ್ದರು.