ಮಂಡ್ಯ: ಛತ್ರಪತಿ ಶಿವಾಜಿ ಅವರ ಆಡಳಿತ ಕಾರ್ಯಶೀಲತೆ, ದೇಶಭಕ್ತಿ ಹಾಗೂ ತ್ಯಾಗ ಎಲ್ಲರಿಗೂ ಮಾದರಿ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿಯ 396ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಛತ್ರಪತಿ ಶಿವಾಜಿ ಪುರುಷರಷ್ಟೇ ಮಹಿಳೆಯರಿಗೂ ಸ್ಥಾನಮಾನ ಹಾಗೂ ಗೌರವವನ್ನು ನೀಡಿದ್ದರು. ಇವರ ಆಡಳಿತ ವ್ಯವಸ್ಥೆಯು ಮರಾಠ ಸಾಮ್ರಾಜ್ಯದ ಸ್ಥಾಪನೆಗೆ ತಳಪಾಯವಾಗಿತ್ತು. ಭಾರತವು ಪ್ರಾಚೀನ ಕಾಲದಿಂದಲೂ ಸಾಕಷ್ಟು ಧೈರ್ಯಶಾಲಿ ಮತ್ತು ವೀರ ಅಡಳಿತಗಾರರ ಹಿನ್ನಲೆಯನ್ನು ಹೊಂದಿದೆ. ಧೈರ್ಯಶಾಲಿ ಅಧಿಪತಿಗಳು ತಾಯಿನಾಡು ಮತ್ತು ಸ್ವರಾಜ್ಯವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿದ್ದರು ಎಂದರು.
ಮಹಾನ್ ಧೈರ್ಯಶಾಲಿ ಸೈನಿಕರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಕೂಡ ಒಬ್ಬರು. ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸಿದ ಕೀರ್ತಿ ಸಲ್ಲುತ್ತದೆ. ಶಿವಾಜಿ ಮತ್ತು ಅವರ ತಾಯಿ ಜೀಜಾಬಾಯಿಯ ಧಾರ್ಮಿಕ ನಿಷ್ಠೆ, ದೇಶಭಕ್ತಿ, ಚಾಣಾಕ್ಷತೆ, ಕಾರ್ಯದಕ್ಷತೆ ಸೇರಿದಂತೆ ಅನೇಕ ಮಾಹಿತಿಯನ್ನು ಹಾಗೂ ಅವರು ಬೆಳೆದು ಬಂದ ಹಾದಿಯನ್ನು 5ನೇ ತರಗತಿಯಿಂದ ಪದವಿ ಶಿಕ್ಷಣದ ವರೆಗೂ ಪಠ್ಯಗಳಲ್ಲಿ ತಿಳಿಯಬಹುದು ಎಂದು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ಕುಮಾರ್, ಸ್ವಾತಂತ್ರ್ಯ ಹೋರಾಟಗಾರ ಶಂಕರ್ ಜಾದವ್, ಮರಾಠ ಪರಿಷತ್ ಅಧ್ಯಕ್ಷ ಸುರೇಶ್ರಾವ್, ಕಾರ್ಯದರ್ಶಿ ಅಂಬೊಜಿ, ಬಿ.ಎಸ್.ಅನುಪಮಾ ಇತರರಿದ್ದರು.