ಶಿವಮೊಗ್ಗ: ಯಾವುದೇ ಶಾಲೆಯ ಮಕ್ಕಳಲ್ಲಿ ಶಿಸ್ತು, ಸಂಯಮವಿದ್ದರೆ ಅದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರವಿರುತ್ತದೆ. ಪ್ರತಿ ಶಿಕ್ಷಕರೂ ಮಕ್ಕಳು ಹಾಗೂ ಪಾಲಕರ ಜತೆಗೆ ಉತ್ತಮ ಒಡನಾಟ ಹೊಂದಿರಬೇಕೆಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಭದ್ರಾವತಿ ತಾಲೂಕು ಕಾರೇಹಳ್ಳಿ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಸೇರಿದ ವಿವಿಧ ಜಿಲ್ಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಯಾವುದೇ ವೃತ್ತಿಯಾಗಿದ್ದರೂ ಅದಕ್ಕೆ ಸೂಕ್ತ ಗೌರವ ನೀಡಲೇಬೇಕು. ಹೀಗೆ ವೃತ್ತಿಯನ್ನು ಗೌರವಿಸುವವರ ಬದುಕು ಹಸನಾಗುತ್ತದೆ ಎಂದರು.
ಶಿಕ್ಷಣ ಇಲಾಖೆ ಕ್ರೀಡಾ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕ ಬಿ.ಎಸ್.ಅನಂತನಾಯ್ಕ ಮಾತನಾಡಿ, ಮಕ್ಕಳಿಗೆ ತರಬೇತಿ ನೀಡಿ ಅವರಲ್ಲಿನ ಉತ್ತಮ ಕೌಶಲಗಳನ್ನು ಗುರುತಿಸಬೇಕು. ಕೆಲವು ಮಕ್ಕಳಲಿ ನ್ಯೂನತೆಗಳಿರುತ್ತವೆ. ಅದನ್ನು ಸರಿಪಡಿಸಿ ಕ್ರೀಡಾಪಟುವನ್ನಾಗಿ ರೂಪಿಸಬೇಕೆಂದರು.
ಕಾರ್ಯಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 250 ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆದಿಚುಂಚನಗಿರಿ ಸಂಸ್ಥಾನ ಮಠದ ಬ್ರಹ್ಮಚಾರಿಗಳಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀ ರಾಜಶೇಖರನಾಥ ಸ್ವಾಮೀಜಿ, ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮೀನಾರಾಯಣ, ಬಾಲಾಜಿ ಪ್ರಭು, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ, ಬಿಜಿಎಸ್ ಕೇಂದ್ರೀಯ ಶಾಲೆಯ ಮುಖ್ಯ ಶಿಕ್ಷಕಿ ಸಿ.ಅಮುದಾ ಮುಂತಾದವರು ಉಪಸ್ಥಿತರಿದ್ದರು.