More

    ಅಕ್ರಮ ಮರಳುಗಾರಿಕೆ ತಡೆಗೆ ಡಿಸಿ ಸೂಚನೆ

    ಶಿವಮೊಗ್ಗ: ಮರಳುಗಾರಿಕೆ ಅವಧಿ ಆರಂಭವಾಗುವುದಕ್ಕೂ ಪೂರ್ವದಲ್ಲೇ ಅಕ್ರಮ ನಿಯಂತ್ರಣಕ್ಕೆ ತಪಾಸಣಾ ತಂಡ ರಚಿಸುವುದು ಸೇರಿದಂತೆ ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಡಿಸಿ ಡಾ. ಆರ್.ಸೆಲ್ವಮಣಿ ಎಲ್ಲ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.
    ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿ ಮಾತನಾಡಿ, ಅಕ್ರಮ ಮರಳುಗಾರಿಕೆ ಪತ್ತೆ ಹಚ್ಚಿ ಅತಿ ಹೆಚ್ಚಿನ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಬೇಕು. ಪ್ರತಿ ತಾಲೂಕಿನಲ್ಲಿ ಈ ಹಿಂದೆ ರಚಿಸಿರುವ ತನಿಖಾ ಠಾಣೆಗಳು ಮತ್ತು ಚಾಲಿತ ದಳಗಳನ್ನು ಪುನಶ್ಚೇತನಗೊಳಿಸಬೇಕು ಎಂದರು.
    ಅಕ್ರಮ ಮರಳನ್ನು ದಾಸ್ತಾನು ಮಾಡಲು ಅರಣ್ಯ ಪ್ರದೇಶ ಬಳಕೆ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು. ಹೊಸನಗರ ತಾಲೂಕಿನ ಈಚಲಕೊಪ್ಪ, ಬಾವಿಕೊಪ್ಪ, ಮುಳುಗುಡ್ಡೆ ಇತ್ಯಾದಿ ಮತ್ತು ಸಾಗರ ತಾಲೂಕಿನ ಕಾರ್ಗಲ್ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಮೋಟಾರ್ ಬೋಟ್ ಬಳಸಿ ಮರಳುಗಾರಿಕೆ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಅದನ್ನು ತಡೆಗಟ್ಟಲು ಪೊಲೀಸರನ್ನು ಒಳಗೊಂಡ ವಿಶೇಷ ಸ್ಕ್ವಾಡ್ ರಚಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
    ಹೊಸ ಮರಳು ನೀತಿಯ ಪ್ರಕಾರ ಜಿಲ್ಲೆಯಲ್ಲಿ ಗ್ರಾಪಂಗಳಿಗೆ 54 ಮರಳು ಬ್ಲಾಕ್‌ಗಳನ್ನು ಮಂಜೂರು ಮಾಡಿದ್ದು ಈ ಪೈಕಿ 24 ಮರಳು ಬ್ಲಾಕ್‌ಗಳನ್ನು ನವೀಕರಣ ಮಾಡಬೇಕಾಗಿದೆ. ಗ್ರಾಪಂಗಳು ಮರಳುಗಾರಿಕೆಗೆ ಕಟ್ಟಿರುವ ರಾಜಧನ ಪರಿಶೀಲಿಸಬೇಕು. ರಾಜಧನ ಪಾವತಿಸುವ ಕುರಿತಾಗಿ ಎಲ್ಲ ಪಿಡಿಒಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು ಎಂದ ಅವರು, ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಲು 5 ಮರಳು ಬ್ಲಾಕ್ ಮಂಜೂರು ಮಾಡಲಾಗಿದೆ. ಈ ಬ್ಲಾಕ್‌ಗಳನ್ನು ಪಡೆದುಕೊಂಡಿರುವ ಇಲಾಖೆಗಳು, ಯಾವ ಸರ್ಕಾರಿ ಕಾಮಗಾರಿಗೆ ಎಷ್ಟು ಮರಳು ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಒದಗಿಸಬೇಕು ಎಂದರು.
    ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಎಸ್ಪಿ ಡಾ.ವಿಕ್ರಮ್ ಅಮಟೆ, ಡಿಎಫ್‌ಒ ಶಿವಶಂಕರ್, ಹಿರಿಯ ಭೂ ವಿಜ್ಞಾನಿ ವಿಂಧ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts