ಶಿವಮೊಗ್ಗ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಬಸವಕೇಂದ್ರದಲ್ಲಿ ಆ.15ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವದ ನೆಲೆಯಲ್ಲಿ ದೇಶವು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, 75ನೇ ಸ್ವಾತಂತ್ರ್ಯ ಉತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ 75 ಮಂದಿ ರಕ್ತದಾನ ಮಾಡಲು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಜೀವಿನಿ ಬ್ಲಡ್ ಬ್ಯಾಂಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳು, ಅಕ್ಕನ ಬಳಗ ಮೊದಲಾದ ಸಂಘ ಸಂಸ್ಥೆಗಳು, ಹಲವು ಯುವಕರು ಶಿಬಿರಕ್ಕೆ ಕೈಜೋಡಿಸಿದ್ದಾರೆ ಎಂದರು.
ಹಿರಿಯರು ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ಸಮರ್ಪಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಮ್ಮ ರಕ್ತ ಎಂಬ ಅಮೃತ ನೀಡಿ ಅರ್ಥಪೂರ್ಣವಾಗಿಸಬೇಕಿದೆ. ಆ ನಿಟ್ಟಿನಲ್ಲಿ ಅಂದು ನಿಮ್ಮೊಂದಿಗೆ ನಾವೂ ರಕ್ತ ನೀಡಲಿದ್ದೇವೆ. ಸಾರ್ವಜನಿಕರೂ ರಕ್ತದಾನ ಮಾಡಬೇಕು ಎಂದರು.
ಒಂದು ಯುನಿಟ್ ರಕ್ತ ನಾಲ್ಕು ಜನರ ಜೀವ ಉಳಿಸಲು ನೆರವಾಗಲಿದೆ. ಹಾಗಾಗಿ ರಕ್ತದಾನದ ಮಹತ್ವದವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ರಕ್ತ ಪಡೆದವರ ಜೀವ ಉಳಿಯುತ್ತದೆ. ಆದ್ದರಿಂದ ನಮ್ಮ ದೇಶದ ಸ್ವಾತಂತ್ರ್ಯ ಮಹೋತ್ಸವಕ್ಕೆ ಅಮೃತ ಕೊಟ್ಟ ತೃಪ್ತಿ ನಮ್ಮ ನಿಮ್ಮದಾಗಲಿ ಎಂದು ಆಶಿಸಿದ ಶ್ರೀಗಳು, ರಕ್ತದಾನ ಮಾಡುವ ಆಸಕ್ತರು ಮೊಬೈಲ್ (9844381292)ನ್ನು ಸಂಪರ್ಕಿಸಬಹುದು ಎಂದರು.
ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಸಜ್ಜನ್, ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಜಿ.ವಿಜಯಕುಮಾರ್, ಬಸವಕೇಂದ್ರದ ಉಪಾಧ್ಯಕ್ಷ ಪಿ.ಚಂದ್ರಪ್ಪ ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ, ಧೃವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.