‘ಜೀರೋ’ ಸೋಲಿನ ನಂತರ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದ ಶಾರೂಖ್ ಖಾನ್ ಇದೀಗ ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಪಠಾಣ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಅಟ್ಲಿ ನಿರ್ದೇಶನದ ಹೊಸ ಚಿತ್ರ ಶುರುವಾಗಲಿದೆ. ಅದೂ ಮುಗಿಸಿ ಮುಂದಿನ ವರ್ಷ ರಾಜಕುಮಾರ್ ಹಿರಾನಿ ನಿರ್ದೇಶನದ ಚಿತ್ರದಲ್ಲಿ ಅವರು ನಟಿಸಲಿದ್ದಾರಂತೆ. ಈ ಚಿತ್ರದ ವಿಶೇಷತೆ ಏನು ಗೊತ್ತಾ? ಶಾರೂಖ್ ಖಾನ್ಗೆ ಮೂವರು ನಾಯಕಿಯರು ಇರಲಿದ್ದಾರಂತೆ!
ಪಂಜಾಬ್ ಮತ್ತು ಕೆನಡದಲ್ಲಿ ನಡೆಯುವ ಕಾಮಿಡಿ ಕಥೆ ಈ ಚಿತ್ರದಲ್ಲಿದ್ದು, ವಲಸೆ ಎಂಬ ಗಂಭೀರ ವಿಷಯವನ್ನು ಇಟ್ಟುಕೊಂಡು, ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಶಾರೂಖ್ ಖಾನ್ ಪತ್ನಿಯಾಗಿ ಕಾಜೋಲ್ ಅಭಿನಯಿಸುತ್ತಿದ್ದಾರೆ. ಇನ್ನು ತಾಪ್ಸಿ ಪನ್ನು ಪತ್ರಕರ್ತೆಯಾಗಿ ಕಾಣಿಸಿಕೊಂಡರೆ, ಶಾರೂಖ್ ಖಾನ್ ಪಯಣದಲ್ಲಿ ಸಹಾಯ ಮಾಡುವ ಒಂದು ಪ್ರಮುಖ ಪಾತ್ರದಲ್ಲಿ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಶಾರೂಖ್ ಮತ್ತು ಕಾಜೋಲ್ ಹಲವು ಹಿಟ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಆದರೆ, ತಾಪ್ಸಿ ಮತ್ತು ವಿದ್ಯಾ ಬಾಲನ್ ಇಬ್ಬರಿಗೂ ಇದು ಶಾರೂಖ್ ಜತೆಗೆ ಮೊದಲ ಚಿತ್ರವಾಗಲಿದೆ. ಇದಲ್ಲದೆ ಬೋಮನ್ ಇರಾನಿ ಮತ್ತು ಮನೋಜ್ ಬಾಜ್ಪೇಯಿಗೆ ಚಿತ್ರದಲ್ಲಿ ಪ್ರಮುಖ ಪಾತ್ರಗಳಿದ್ದು, ಇಬ್ಬರೂ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಶಾರೂಖ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ವೆುಂಟ್ ಸಂಸ್ಥೆ ನಿರ್ವಿುಸುತ್ತಿದ್ದು, ನಿಜಕ್ಕೂ ಈ ಎಲ್ಲ ಕಲಾವಿದರು ಚಿತ್ರದಲ್ಲಿ ನಟಿಸುವಂತಾಗಿಬಿಟ್ಟರೆ, ಚಿತ್ರದ ಮೇಲೆ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.