ಬಣಕಲ್: ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದ ಗ್ರಾಹಕರು ತಿದ್ದುಪಡಿ ಮಾಡಲಾಗದೇ ಪರದಾಡುವಂತಾಗಿದೆ.
ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತಲಿನ ಗ್ರಾಮಒನ್ ಕೇಂದ್ರಗಳಲ್ಲಿ ಜನರು ರೇಷನ್ ಕಾರ್ಡ್ಗಳಲ್ಲಿ ಹೆಸರು ತಿದ್ದುಪಡಿ, ಹೆಸರು ಸೇರಿಸುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ತಿದ್ದುಪಡಿಗೆ ಸರ್ವರ್ ಕಂಟಕವಾಗಿದೆ. ಹಲವು ಗ್ರಾಮ ಒನ್ ಕೇಂದ್ರಗಳಲ್ಲಿ ಪಡಿತರ ಚೀಟಿಗೆ ಸರ್ವರ್ ಸಮಸ್ಯೆಯಿಂದ ಸೈಟ್ಒಪನ್ ಆಗುತ್ತಿಲ್ಲ. ಸರ್ವರ್ ಅನಾನುಕೂಲದಿಂದ ಜನರು ಸಾಲುಗಟ್ಟಿ ಗ್ರಾಮ ಒನ್ಗಳಲ್ಲಿ ಗಂಟೆ ಗಟ್ಟಲೇ ನಿಂತರೂ ತಿದ್ದುಪಡಿ ಸಾಧ್ಯವಾಗುತ್ತಿಲ್ಲ.
ತಿದ್ದುಪಡಿಗಾಗಿ ದೂರದ ಊರುಗಳಲ್ಲಿ ಇದ್ದವರು ಊರಿಗೆ ಬಂದಿದ್ದರೂ ತಿದ್ದುಪಡಿಯಾಗದೇ ಮನೆಗೆ ವಾಪಾಸ್ ತೆರಳುವಂತಾಗಿದೆ. ಸರ್ಕಾರ ನಾಡಕಚೇರಿಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡದೇ ಗ್ರಾಮ ಒನ್ನಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಕೆಲವೇ ಗ್ರಾಮಒನ್ ಕೇಂದ್ರಗಳು ಬಣಕಲ್, ಬಾಳೂರು ಹೋಬಳಿಗಳಲ್ಲಿ ಕಾರ್ಯನಿರತವಾಗಿರುವುದರಿಂದ ಸರ್ವರ್ ಸಮಸ್ಯೆ ಗ್ರಾಮ ಒನ್ ಕೇಂದ್ರದಲ್ಲಿ ಸೇವೆ ನೀಡಲು ತೊಂದರೆಯಾಗಿದೆ. ಇದರಿಂದ ಕೂಲಿ ಕಾರ್ಮಿಕರಂತೂ ಕೆಲಸಕ್ಕೆ ಒಂದು ದಿನ ರಜೆ ಹಾಕಿ ಪಡಿತರ ಚೀಟಿ ತಿದ್ದುಪಡಿಗೆ ಸಾಲುಗಟ್ಟಿ ನಿಂತರೂ ಸಾಧ್ಯವಾಗದೇ ಕೆಲಸವೂ ಇಲ್ಲದೇ ದಿನ ದೂಡುವಂತಾಗಿದೆ.