ಚೆನ್ನೈ: ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸಿ. ವಿಜಯ್ಕುಮಾರ್(45) ಎಂದು ಗುರುತಿಸಲಾಗಿದ್ದು, ಇವರು ಕೊಯಮತ್ತೂರು ಜಿಲ್ಲೆಯ ಡೆಪ್ಯೂಟಿ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ 6:45ರ ಸುಮಾರಿಗೆ ವಾಯು ವಿಹಾರ ಮುಗಿಸಿಕೊಂಡು ವಾಪಸ್ ಬಂದ ನಂತರ ಸರ್ವೀಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2009ರ ಬ್ಯಾಚ್ನ ತಮಿಳುನಾಡು ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದ ವಿಜಯ್ಕುಮಾರ್ ಅವರು ಕಳೆದ ಕೆಲ ತಿಂಗಳುಗಳಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ನಿದ್ರಾಹೀನತೆಯಿಂದ ಸಹ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಿಂಗಾಯತರ ಶೈಕ್ಷಣಿಕ ಕ್ರಾಂತಿಗೆ ಮಹಾಸಭಾ ಕಾರಣ: ಎಂ.ಬಿ. ಪಾಟೀಲ್
ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಡಿಜಿಪಿ ಶಂಕರ್ ಜೈವಾಲ್ ವಿಜಯ್ಕುಮಾರ್ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. ನಿದ್ರಾಹೀನತೆಯಿಮದ ಬಳುತ್ತಿದ್ದ ಅವರು ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದು ಹೇಳಲಾಗಿದೆ.
ಅವರ ಆತ್ಮಹತ್ಯೆಗೆ ಕೆಲಸದ ಒತ್ತಡವೂ ಸಹ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖಾ ವರದಿ ಕೈ ಸೇರಿದ ನಂತರ ಮತ್ತಷ್ಟು ಮಾಹಿತಯನ್ನು ಹಂಚಿಕೊಳ್ಳಲಾಗುವುದು ಎಂದು ತಮಿಳುನಾಡು ಡಿಜಿಪಿ ಶಂಕರ್ ಜೈವಾಲ್ ತಿಳಿಸಿದ್ದಾರೆ.