ಉಡುಪಿ: ಕೆಲವು ದಿನಗಳ ಹಿಂದೆ ಅಪಘಾತದಿಂದ ಗಾಯಗೊಂಡು ಹೊಸ ಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಗೌರಿ ಎಂಬ ಹಸುವಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ಬುಧವಾರ ನಡೆಯಿತು.
ಗೌರಿಯನ್ನು ಸ್ನಾನ ಮಾಡಿಸಿದ ಬಳಿಕ, ಅಲಂಕಾರ ಮಾಡಿ, ನಡಿಗೆ ಯಂತ್ರದ ಸಹಾಯದಿಂದ ಮಂಟಪಕ್ಕೆ ಕರೆತರಲಾಯಿತು. ಗೌರಿ ಹಸುವಿಗೆ ಹಸಿರು ಬಣ್ಣದ ಸೀರೆ ಉಡಿಸಲಾಯಿತು. ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಮಡಿಲು ತುಂಬಿಸಲಾಯಿತು. ಮೊಳಕೆ ನವಧಾನ್ಯಗಳು, ವಿವಿಧ ಹಿಂಡಿಗಳು, ಬಯಕೆಯ ಖಾದ್ಯ ಬಡಿಸಲಾಯಿತು. ಮುತ್ತೈದೆಯರು ಆರತಿ ಬೆಳಗಿ ಪೂಜಿಸಿದರು. ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ಹೊಸಬೆಳಕು ಆಶ್ರಮ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಆಚಾರ್ಯ, ಮಾಂಡವಿ ಆಟೋ ನಿಲ್ದಾಣದ ಚಾಲಕರು ಉಪಸ್ಥಿತರಿದ್ದರು.