ಮಂಡ್ಯ: ಪ್ರತಿನಿತ್ಯ ನಡೆಯುತ್ತಿರುವ ವಿಜ್ಞಾನದ ಆವಿಷ್ಕಾರಗಳು ಮನುಷ್ಯನ ಜೀವನವನ್ನು ಸರಳಗೊಳಿಸುತ್ತಿದೆ ಎಂದು ಎಸ್ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಹೇಳಿದರು.
ನಗರದ ಹೊರವಲಯದ ಮಾಂಡವ್ಯ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಕ್ಯಾಂಪಸ್ನ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ದಿನಾಚರಣೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವುದು. ಪ್ರತಿಯೊಂದರಲ್ಲೂ ನಾವು ವಿಜ್ಞಾನವನ್ನು ಕಾಣುತ್ತೇವೆ. ಅದನ್ನು ಸಮರ್ಪಕವಾಗಿ ತಿಳಿದುಕೊಂಡಲ್ಲಿ ಮೂಢನಂಬಿಕೆಯಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೂಢನಂಬಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಶೀಲರಾಗಬೇಕು. ಅದರಲ್ಲಿ ವಿಜ್ಞಾನದ ಅಂಶವಿದೆಯೇ ಎಂಬುದನ್ನೂ ತಿಳಿಯಲು ಕಾರ್ಯೋನ್ಮುಖರಾಗಬೇಕು. ಮನುಷ್ಯನು ಬಾಹ್ಯಾಕಾಶವನ್ನು ತಲುಪಿರುವುದು ವಿಜ್ಞಾನದ ಸಹಾಯದಿಂದ ಮಾತ್ರ. ರೋಬೋಟ್, ಕಂಪ್ಯೂಟರ್ಗಳನ್ನು ತಯಾರಿಸಲು ಸಾಧ್ಯವಾಗಿಸಿದೆ. ನಮ್ಮ ಜೀವನಕ್ಕೆ ಬಹಳ ಮುಖ್ಯವಾದ ಕೊಡುಗೆಯನ್ನು ನೀಡುತ್ತದೆ. ನಮ್ಮ ದೇಶದ ಮಹಾನ್ ವಿಜ್ಞಾನಿಗಳ ಕೊಡುಗೆಯಿಂದಾಗಿ ಇಂದು ವಿಶ್ವದಲ್ಲಿ ಭಾರತವನ್ನು ವಿಶಿಷ್ಟವಾಗಿ ಗುರುತಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಪಿ.ಸುಮಾರಾಣಿ, ಪ್ರಾಂಶುಪಾಲ ಶ್ರೀನಿವಾಸ್, ಭವಾನಿ ಶಂಕರ್, ಮುಖ್ಯಶಿಕ್ಷಕ ರಾಜಣ್ಣ ಇತರರಿದ್ದರು. ಇದೇ ವೇಳೆ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.